ದೇವೇಗೌಡರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಪ್ರಜ್ವಲ್ ರೇವಣ್ಣ ನಕಾರ | ವಿವಾದದಿಂದ ದೂರ ಉಳಿಯಲು ಈ ನಿರ್ಧಾರ 

ರಾಜಕಾರಣಿ ತಂದೆಯ ಮಾತನ್ನು ಮೀರುವ ಅಧಿಕಾರ ಇರೋದು ಮಕ್ಕಳಿಗೆ ಮಾತ್ರ, ಹಿಂಬಾಲಕರಿಗೆ ಅಲ್ಲ. ಮೊನ್ನೆ ಲೋಕಸಭೆಯಲ್ಲಿ ಪ್ರಮಾಣ ವಚನಕ್ಕೆಂದು ಸಂಸದ ಪ್ರಜ್ವಲ್ ರೇವಣ್ಣ ತಂದೆ ರೇವಣ್ಣ ಹಾಗೂ ತಾಯಿ ಭವಾನಿ ಜೊತೆ ಬಂದಿದ್ದರು.

Add Asianetnews Kannada as a Preferred SourcegooglePreferred

ಇನ್ನೇನು ರೂಮಿನಿಂದ ಹೊರಡಬೇಕು ಎಂದಾಗ ರೇವಣ್ಣ ಮಗನಿಗೆ, ‘ದೇವೇಗೌಡರ ಹೆಸರಲ್ಲಿ ಪ್ರಮಾಣ ತಗೋ’ ಎಂದರು. ಆದರೆ ಪ್ರಜ್ವಲ್‌, ‘ಬೇಡ ಅಪ್ಪ, ಕೇವಲ ಸಂವಿಧಾನ ಅಥವಾ ದೇವರ ಹೆಸರಲ್ಲಿ ಪ್ರಮಾಣ ವಚನ ತೆಗೆದುಕೊಳ್ಳಬೇಕು ಎಂದು ಮ್ಯಾನುವಲ್‌ನಲ್ಲಿದೆ. ವಿನಾಕಾರಣ ವಿವಾದ ಬೇಡ’ ಎಂದು ತಂದೆಯನ್ನು ಸುಮ್ಮನಾಗಿಸಿದರು.

ಗಮನಿಸಬೇಕಾದ ಸಂಗತಿ ಎಂದರೆ ಪ್ರಜ್ವಲ್‌ ಪ್ರಮಾಣ ವಚನಕ್ಕೆ ರೇವಣ್ಣ ಮತ್ತು ಭವಾನಿ ತವರು ಮನೆಯವರು ಬಿಟ್ಟರೆ ಕುಮಾರಸ್ವಾಮಿ ಕುಟುಂಬದಿಂದ ಯಾರೂ ಬಂದಿರಲಿಲ್ಲ. ಕುಟುಂಬದಲ್ಲಿ ಒಮ್ಮೆ ಪವರ್‌ ಪಾಲಿಟಿಕ್ಸ್‌ ಶುರುವಾದರೆ ಸಂಬಂಧಗಳು ವ್ಯಾವಹಾರಿಕವಾಗುತ್ತವೆ.

ಆತ್ಮಕತೆ ಬಗ್ಗೆ ಗೌಡರ ನಿರಾಸಕ್ತಿ

ಕಳೆದ ಒಂದು ವರ್ಷದಿಂದ ರೂಪಾ ಪಬ್ಲಿಕೇಶನ್ಸ್‌ ಹೊರತರಬೇಕಿರುವ ಆತ್ಮಚರಿತ್ರೆ ಬಗ್ಗೆ ದೇವೇಗೌಡರು ಭಾರೀ ಉತ್ಸಾಹದಿಂದಿದ್ದರು. ಪ್ರತಿ ವಾರಕ್ಕೆ ಎರಡು ದಿನ ಬಂದು ಲೇಖಕನ ಜೊತೆ ಕುಳಿತು ಬರೆಸಿ ಕರಡು ನೋಡುತ್ತಿದ್ದರು.

ಆದರೆ ತುಮಕೂರಿನಲ್ಲಿ ಸೋತ ನಂತರ ಗೌಡರು ಪುಸ್ತಕದ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರಂತೆ. ಅಂದಹಾಗೆ ದಿಲ್ಲಿಗೆ ಬರಲು ಗೌಡರಿಗೆ ಮನಸ್ಸಿಲ್ಲ. 6 ಜನ ಇದ್ದ ಸಿಬ್ಬಂದಿ ಸಂಖ್ಯೆ ಈಗ 2ಕ್ಕೆ ಇಳಿದಿದೆ. ಸೆಂಟ್ರಲ್ ಹಾಲ್‌ಗೆ ಹೋಗಲು ಮಾಜಿ ಸಂಸದರು ತೆಗೆದುಕೊಳ್ಳುವ ಪಾಸ್‌ ಕೂಡ ಸದ್ಯಕ್ಕೆ ಬೇಡ ಎಂದಿದ್ದಾರಂತೆ. ಇಳಿ ವಯಸ್ಸಿನಲ್ಲಿ ಸೋಲು ಅರಗಿಸಿಕೊಳ್ಳೋದು ಕಷ್ಟ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ