ಕರಾವಳಿ ಭಾಗದಲ್ಲಿ ಇಳಿಮುಖವಾಗಿದ್ದ ಮುಂಗಾರು ಮಳೆ ಮಂಗಳವಾರದಿಂದ ಮತ್ತೆ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಮಲೆನಾಡಿನ ಭಾಗಶಃ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಜೂ.24ರವರೆಗೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು (ಜೂ. 20): ಕರಾವಳಿ ಭಾಗದಲ್ಲಿ ಇಳಿಮುಖವಾಗಿದ್ದ ಮುಂಗಾರು ಮಳೆ ಮಂಗಳವಾರದಿಂದ ಮತ್ತೆ ಧಾರಾಕಾರವಾಗಿ ಸುರಿಯಲಾರಂಭಿಸಿದೆ. ಮಲೆನಾಡಿನ ಭಾಗಶಃ ಪ್ರದೇಶಗಳಲ್ಲೂ ಉತ್ತಮ ಮಳೆಯಾಗಿದೆ. ಜೂ.24ರವರೆಗೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Add Asianetnews Kannada as a Preferred SourcegooglePreferred

ಅಲ್ಲದೆ, ಜೂ.20 ಮತ್ತು 21ರಂದು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವೆಡೆ, ಜೂ.22ರಿಂದ 24ರವರೆಗೆ ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಭಾರೀ ಮಳೆ ನಿರೀಕ್ಷಿಸಲಾಗಿದೆ ಎಂದು ತಿಳಿಸಲಾಗಿದೆ.

ಕರಾವಳಿಯಾದ್ಯಂತ ಮಂಗಳವಾರ ವ್ಯಾಪಕ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕನಿಷ್ಠ 5ರಿಂದ ಗರಿಷ್ಠ 98 ಮಿ.ಮೀ. ವರೆಗೆ ಭಾರೀ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲೂ 69 ಮಿ.ಮೀ. ವರೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 69.8 ಮಿ.ಮೀ. ವರೆಗೆ ಗರಿಷ್ಠ ಮಳೆ ಬಿದ್ದಿದೆ. ಇದರಿಂದ ಇಳಿಮುಖವಾಗಿದ್ದ ನದಿ, ಹಳ್ಳ ಕೊಳ್ಳಗಳು ಮತ್ತೆ ತುಂಬಿ ಹರಿಯಲಾರಂಭಿಸಿದ್ದು, ಜಲಾಶಯಗಳ ನೀರಿನ ಮಟ್ಟದಲ್ಲಿ ಕೂಡ ಏರಿಕೆಯಾಗತೊಡಗಿದೆ.

ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಕರಾವಳಿಗೆ ಹೊಂದಿಕೊಂಡಿರುವ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಗರಿಷ್ಠ 25 ಮಿ.ಮೀ. ವರೆಗೆ ಕೊಡಗಿನಲ್ಲಿ ಗರಿಷ್ಠ 77 ಮಿ.ಮೀ. ವರೆಗೆ ಮಳೆಯಾಗಿದೆ.