ಸಿಟಿ ರವಿ ಮಣಿಸಲು 'ಕೈ' ತಂತ್ರ: ಜಮೀರ್ ಸೋಲಿಸಲು ಗೌಡರಿಂದ ಸೂಪರ್ ಮಾಸ್ಟರ್ ಪ್ಲ್ಯಾನ್ !
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಸತತವಾಗಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಸಿ.ಟಿ.ರವಿಯನ್ನು ಸೋಲಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ.
ಬೆಂಗಳೂರು(ಫೆ.27): ಚುನಾವಣೆ ಹತ್ತಿರ ಬರುತ್ತಿದಂತೆ ಎಲ್ಲ ರಾಜಕೀಯ ಪಕ್ಷಗಳು ಚುರುಕಿನ ಚಟುವಟಿಕೆ ಆರಂಭಿಸಿವೆ. ತಮ್ಮ ಕ್ಷೇತ್ರ ಉಳಿಸಿಕೊಳ್ಳಲು, ವಿರೋಧಿಗಳನ್ನು ಹಣಿಯಲು ವಿವಿಧ ರೀತಿಯಲ್ಲಿ ಕಾರ್ಯತಂತ್ರ ರೂಪಿಸಲು ತಯಾರಾಗುತ್ತಿವೆ.
ಸಿ.ಟಿ. ರವಿ ಸೋಲಿಸಲು ತಂತ್ರ ರೆಡಿ
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಸತತವಾಗಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿರುವ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಸಿ.ಟಿ.ರವಿಯನ್ನು ಸೋಲಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ. ಅದೇ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕರಾದ ಕರ್ನಾಟಕ ಚಿತ್ರಕಲಾ ಪರಿಷತ್'ನ ಅಧ್ಯಕ್ಷರಾದ ಕಾಂಗ್ರೆಸ್'ನ ಹಿರಿಯ ಮುಖಂಡರಾದ ಬಿ.ಎಲ್. ಶಂಕರ್ ಅವರನ್ನು ಕಣಕ್ಕಿಳಿಸಲು ಮುಖಂಡರು ಕಸರತ್ತು ನಡೆಸುತ್ತಿದ್ದಾರೆ. ಶಂಕರ್ ಅವರಿಂದ ತಾತ್ಕಾಲಿಕ ಒಪ್ಪಿಗೆಯೂ ದೊರೆತಿದೆ ಎನ್ನಲಾಗಿದೆ. ಬಿ.ಎಲ್.ಶಂಕರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ದಾರದಹಳ್ಳಿಯವರು.
ಜಮೀರ್ ಸೋಲಿಸಲು ಮಾಸ್ಟರ್ ಪ್ಲ್ಯಾನ್
ಜೆಡಿಎಸ್ ವಿರುದ್ಧ ಬಂಡೆದ್ದು ಉಚ್ಚಾಟನೆಗೊಂಡಿರುವ ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್. ಜಮೀರ್ ಅಹಮದ್ ಖಾನ್ ಅವರನ್ನು ಶತಾಯಗತಾಯ ಮಣಿಸಲು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸೂಪರ್ ಐಡಿಯಾ ರೂಪಿಸಿದ್ದಾರೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ರಣತಂತ್ರ ರೂಪಿಸಿರುವ ಗೌಡರು ಎಐಎಂಐಎಂ ಪಕ್ಷದ ಓವೈಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಓವೈಸಿ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನು ಮಾಜಿ ಪ್ರಧಾನಿಗಳು ಮುಗಿಸಿದ್ದಾರೆ ಎನ್ನಲಾಗಿದೆ. ಗೌಡರ ತಂತ್ರ ಯಶಸ್ವಿಯಾಗುತ್ತಾ ಇನ್ನು ಮೂರು ತಿಂಗಳಲ್ಲಿ ಎಲ್ಲವೂ ಗೊತ್ತಾಗಲಿದೆ.