ಸಲ್ಮಾನ್ ಖಾನ್ ಹತ್ಯೆಗೆ ವಿಫಲ ಯತ್ನ?
- ಶೂಟಿಂಗ್ ಸ್ಥಳದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ
- ಪೊಲೀಸರ ಸೂಚನೆ ಮೇರೆಗೆ ಶೂಟಿಂಗ್ ರದ್ದು
ಮುಂಬೈ: ಕೃಷ್ಣಮೃಗ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗಾಗಿ ಇತ್ತೀಚೆಗಷ್ಟೇ ರಾಜಸ್ಥಾನದ ಕೋರ್ಟ್ಗೆ ಹಾಜರಾದ ವೇಳೆ ನ್ಯಾಯಾಲಯದ ಆವರಣದಲ್ಲೇ ರೌಡಿಶೀಟರ್ ಓರ್ವ ಹತ್ಯೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ ಬೆನ್ನಲ್ಲೇ, ನಟ ಸಲ್ಮಾನ್ ಖಾನ್ ಅವರನ್ನು ಹುಡುಕಿಕೊಂಡು ರೇಸ್-3 ಚಿತ್ರದ ಶೂಟಿಂಗ್ ಸ್ಪಾಟ್ಗೆ ಕೆಲವು ಅನಾಮಿಕರು ಬಂದಿದ್ದು, ಅವರು ಸಲ್ಮಾನ್ ಖಾನ್ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ.
ಹಾಗಾಗಿ, ಗುರುವಾರ ಇಲ್ಲಿ ಸಲ್ಮಾನ್ ಖಾನ್ ಅವರ ರೇಸ್-3 ಚಿತ್ರದ ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ 12ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಚಿತ್ರದ ಶೂಟಿಂಗ್ ಅನ್ನು ಮುಂದಕ್ಕೆ ಹಾಕುವಂತೆ ಸೂಚನೆ ನೀಡಿದರು.
ಪೊಲೀಸರ ನಿರ್ದೇಶನದ ಮೇರೆಗೆ ಚಿತ್ರದ ನಿರ್ಮಾಪಕ ರಮೇಶ್ ತೌರಾನಿ ಅವರು ಚಿತ್ರದ ಶೂಟಿಂಗ್
ಅನ್ನು ಮುಂದೂಡಿದ್ದಾರೆ. ಸಲ್ಮಾನ್ ಖಾನ್ ಅವರನ್ನು ತಮ್ಮ ಭದ್ರತೆಯಲ್ಲೇ ಮುಂಬೈನ ಬಾಂದ್ರಾ ನಿವಾಸಕ್ಕೆ ಕರೆದೊಯ್ದಿದಿರುವ ಪೊಲೀಸರು, ಸಲ್ಲು ನಿವಾಸಕ್ಕೂ ಭದ್ರತೆ ಕಲ್ಪಿಸಿದ್ದಾರೆ.
ಈ ಹಿಂದೆಯೂ ನಟ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಸದಸ್ಯರು ಹಲವು ಬಾರಿಗೆ ಬೆದರಿಕೆ ಮತ್ತು ಧಮ್ಕಿಯಂಥ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಆದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂದಾಲೋಚನಾ ಕ್ರಮವಾಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.