ಕಾರು ಚಾಲನೆ ವೇಳೆ ಹೃದಯಾಘಾತಕ್ಕೆ ಈಡಾದವನ ರಕ್ಷಿಸಿದ ಪೊಲೀಸ್
ಡ್ರೈವ್ ಮಾಡುತ್ತಿರುವಾಗ ಅಪಘಾತವಾದರೆ ನೆರವಿಗೆ ಧಾವಿಸುವ ಸಂಚಾರಿ ಪೊಲೀಸರು, ಚಾಲನೆ ಮಾಡುತ್ತಿರುವಾಗ ಹೃದಯಾಘಾತವಾದ ಚಾಲಕನಿಗೆ ನೆರವು ನೀಡಿ, ಪ್ರಾಣ ಉಳಿಸಿಕೊಳ್ಳಲು ನೆರವಾಗಿದ್ದಾರೆ.
ಠಾಣೆ: ಕಾರು ಚಾಲನೆ ವೇಳೆ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಕರ್ತವ್ಯ ನಿರತ ಸಂಚಾರಿ ವಿಭಾಗದ ಕಾನ್ಸ್ಟೇಬಲ್ವೊಬ್ಬರು ಆಸ್ಪತ್ರೆಗೆ ಕರೆದೊಯ್ದ ಮಾನವೀಯ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಖಾರಿಗಾಂವ್ ಟೋಲ್ ಬೂತ್ನಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆ ಪಂಡರಿನಾಥ್ ಮುಂಡೆ(35) ಕಾರು ಚಾಲನೆ ಮಾಡುತ್ತಿದ್ದ ನಿಖಿಲ್ ಟಕಂಬೊಲೆ(23) ಎಂಬುವರು ಹೃದಯಾಘಾತಕ್ಕೀಡಾಗಿರುವುದನ್ನು ಕಂಡರು. ಈ ವೇಳೆ ಅಲ್ಲಿಗೆ ದೌಡಾಯಿಸಿದ ಸಂಚಾರಿ ಕಾನ್ಸ್ಟೇಬಲ್ ಮುಂಡೆ, ಯುವಕನನ್ನು ಹಿಂಬದಿ ಸೀಟಿನಲ್ಲಿ ಕೂರಿಸಿ, ಹತ್ತಿರದ ಆಸ್ಪತ್ರೆಗೆ ತಾವೇ ಕಾರು ಚಾಲನೆ ಮಾಡಿಕೊಂಡು ಹೋದರು.
ಪೇದೆಯ ಈ ಕಾರ್ಯ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.