ಐಎಂಎ ಕಪ್ಪ ಸ್ವೀಕರಿಸಿದ ಐಪಿಎಸ್‌, ಕೆಲ ಪೊಲೀಸರಿಗೆ ನಡುಕ ಶುರು! ಐಎಂಎ ಮಾಲಿಕನೊಂದಿಗೆ ಖಾಕಿ ಆತ್ಮೀಯತೆ | ಇದನ್ನೇ ರಕ್ಷಾ ಕವಚ ಮಾಡಿಕೊಂಡಿದ್ದ ಮನ್ಸೂರ್‌ | ಡೀಸಿ, ಎಸಿ, ಗ್ರಾಮ ಲೆಕ್ಕಿಗನ ಬಂಧನ ಬೆನ್ನಲ್ಲೇ ಕಾಣಿಕೆ ಪಡೆದ ಪೊಲೀಸರಿಗೆ ಬಂಧನ ಭೀತಿ ಶುರು 

ಬೆಂಗಳೂರು (ಜು. 10): ಮಹಾ ಮೋಸಗಾರ ಮಹಮ್ಮದ್‌ ಮನ್ಸೂರ್‌ ಖಾನ್‌ನಿಂದ ‘ಫಲಾನುಭವಿ’ಗಳಾದ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು ಎಸ್‌ಐಟಿ ಬಲೆಗೆ ಬಿದ್ದ ಬೆನ್ನಲ್ಲೇ ಈಗ ಹಿರಿಯ ಐಪಿಎಸ್‌ ಅಧಿಕಾರಿ ಸೇರಿ ಕೆಲ ಪೊಲೀಸರಲ್ಲಿ ನಡುಕ ಶುರುವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

Add Asianetnews Kannada as a Preferred SourcegooglePreferred

ಬೆಂಗಳೂರು ಪೂರ್ವ ವಿಭಾಗದಲ್ಲಿ ಕಾರ್ಯನಿರ್ವಹಿಸುವಾಗ ಕೆಲ ಪೊಲೀಸರು, ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಐಎಂಎ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಈ ಖಾಕಿ ಸ್ನೇಹವನ್ನು ತನ್ನ ಅಕ್ರಮ ವ್ಯವಹಾರಕ್ಕೆ ರಕ್ಷಣಾ ಬೇಲಿ ಮಾಡಿಕೊಂಡಿದ್ದ ಮನ್ಸೂರ್‌, ಇದಕ್ಕೆ ಪ್ರತಿಯಾಗಿ ಪೊಲೀಸರಿಗೆ ‘ಕಾಣಿಕೆ’ ಸಲ್ಲಿಸಿದ್ದ ಎನ್ನಲಾಗುತ್ತಿದೆ.

ಅದರಲ್ಲೂ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರ ಮನ್ಸೂರ್‌ ಸಂಬಂಧವು ಇಲಾಖೆಗೆ ಮುಜುಗರ ತಂದಿತ್ತು. ಆ ಅಧಿಕಾರಿಯೇ ಮುತುವರ್ಜಿವಹಿಸಿ ಮನ್ಸೂರ್‌ಗೆ ಬಂದೂಕಿನ ಪರವಾನಿಗೆ ಕೊಡಿಸಿದ್ದರು. ಹಬ್ಬ-ಹರಿದಿನಗಳು ಮಾತ್ರವಲ್ಲ ಕಾಲಾನುಕಾಲಕ್ಕೆ ಪೊಲೀಸರಿಗೆ ಚಿನ್ನ ಮತ್ತು ನಗದು ರೂಪದಲ್ಲಿ ಮನ್ಸೂರ್‌ನಿಂದ ಕಾಣಿಕೆ ಸಂದಾಯವಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಈ ವ್ಯವಹಾರದ ಕುರಿತು ಮಾಹಿತಿ ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು, ಕೆಲ ಪೊಲೀಸರಿಗೂ ತನಿಖೆ ಬಿಸಿ ಮುಟ್ಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

90 ಲಕ್ಷ ಮೌಲ್ಯದ ವಸ್ತು ಜಪ್ತಿ:

ಶಿವಾಜಿನಗರದ ಸೆಫ್ಟಿಂಗ್‌ ರಸ್ತೆಯಲ್ಲಿರುವ ಐಎಂಎ ಸಂಸ್ಥೆಯ ಒಡೆತನದ ಗಟ್ಟಿಚಿನ್ನ ಮತ್ತು ಬೆಳ್ಳಿ ಸಂಸ್ಕರಣಾ ಕೇಂದ್ರದ ಮೇಲೆ ಮಂಗಳವಾರ ದಾಳಿ ನಡೆಸಿ ಎಸ್‌ಐಟಿ ಅಧಿಕಾರಿಗಳು, .71.39 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ .18.16 ಲಕ್ಷ ನಗದು ಸೇರಿ ಒಟ್ಟು .90 ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.