ಕೊಚ್ಚಿ ಮೆಟ್ರೋ ಉದ್ಘಾಟನೆಗೆ ಇ.ಶ್ರೀಧರನ್'ಗೆ ಆಹ್ವಾನ; ವಿವಾದಕ್ಕೆ ಪೂರ್ಣವಿರಾಮ
ಜೂ.17 ರಂದು ಲೋಕಾರ್ಪಣೆಗೊಳ್ಳಲಿರುವ ಕೊಚ್ಚಿ ಮೆಟ್ರೋ ಉದ್ಘಾಟನಾ ಸಮಾರಂಭಕ್ಕೆ ಎರಡು ದಿನಗಳ ನಿಶ್ಚಿತತೆಯ ನಂತರ ಕೊನೆಗೂ ಮೆಟ್ರೋ ಮ್ಯಾನ್ ಎಂದೇ ಖ್ಯಾತರಾಗಿರುವ ಇ.ಶ್ರೀಧರನ್ ರವರನ್ನು ಆಹ್ವಾನಿಸಿಸಲಾಗಿದೆ.
ನವದೆಹಲಿ (ಜೂ.15): ಜೂ.17 ರಂದು ಲೋಕಾರ್ಪಣೆಗೊಳ್ಳಲಿರುವ ಕೊಚ್ಚಿ ಮೆಟ್ರೋ ಉದ್ಘಾಟನಾ ಸಮಾರಂಭಕ್ಕೆ ಎರಡು ದಿನಗಳ ನಿಶ್ಚಿತತೆಯ ನಂತರ ಕೊನೆಗೂ ಮೆಟ್ರೋ ಮ್ಯಾನ್ ಎಂದೇ ಖ್ಯಾತರಾಗಿರುವ ಇ.ಶ್ರೀಧರನ್ ರವರನ್ನು ಆಹ್ವಾನಿಸಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೊಚ್ಚಿ ಮೆಟ್ರೋವನ್ನು ಉದ್ಘಾಟನೆ ಮಾಡಲಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅತಿಥಿಗಳ ಪಟ್ಟಿಯಲ್ಲಿ ಮೆಟ್ರೋ ಮಾಸ್ಟರ್ ಮೈಂಡ್ ಇ. ಶ್ರೀಧರನ್ ಅವರ ಹೆಸರನ್ನು ಹಾಕದೇ, ಅವರನ್ನು ಸಮಾರಂಭಕ್ಕೆ ಆಹ್ವಾನಿಸದೇ ಅವಮಾನ ಮಾಡಲಾಗಿತ್ತು. ಪ್ರಧಾನ ಮಂತ್ರಿ ಕಾರ್ಯಾಲಯದ ಈ ಎಡವಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ನನ್ನನ್ನು ಆಹ್ವಾನಿಸದೇ ಇರುವುದು ಮುಖ್ಯ ಅಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯೇ ಮುಖ್ಯ. ನನಗೆ ಬೇಸರವಿಲ್ಲ ಎಂದು ಶ್ರೀಧರನ್ ವಿವಾದವನ್ನು ಮುಂದುವರೆಸಲು ನಿರಾಕರಿಸಿದ್ದರು. ಕಡೆಗೂ ಎಚ್ಚೆತ್ತ ಪ್ರಧಾನಿ ಕಾರ್ಯಾಲಯ ಇಂದು ಕೇರಳ ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಶ್ರೀಧರನ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲು ತಿಳಿಸಿದೆ. ಇವರ ಜೊತೆಗೆ ವಿರೋಧ ಪಕ್ಷ ನಾಯಕ ರಮೇಶ್ ಚೆನ್ನಿತ್ತಾಲರವರನ್ನು ಕೂಡಾ ಆಹ್ವಾನಿಸಲಾಗಿದೆ.
ಕೊಚ್ಚಿ ಮೆಟ್ರೋ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಇನ್ನು ಕೆಲವು ಗಣ್ಯರನ್ನು ಆಹ್ವಾನಿಸುವಂತೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ.