ಇನ್ನು ಮೇಘಾಲಯದಲ್ಲಿ ಅತಂತ್ರ ಸ್ಥಿತಿ ತಲೆದೋರಿದ್ದರೂ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಪುನಃ ಅಧಿಕಾರಕ್ಕೆ ಬರುವ ಹವಣಿಕೆಯಲ್ಲಿದೆ. ಆದರೆ ತ್ರಿಪುರ ಹಾಗೂ ನಾಗಾಲ್ಯಾಂಡ್‌ನಲ್ಲಿ ‘ಶೂನ್ಯ ಸಂಪಾದನೆ’ ಮಾಡಿರುವುದು ಕಾಂಗ್ರೆಸ್ ವರಿಷ್ಠರನ್ನು ಚಿಂತೆಗೀಡು ಮಾಡಿದೆ.

ನವದೆಹಲಿ(ಮಾ.04): ದೇಶಾದ್ಯಂತ ತನ್ನ ಅಧಿಪತ್ಯ ಸ್ಥಾಪಿಸುವ ಮಹದಾಸೆ ಹೊಂದಿರುವ ಭಾರತೀಯ ಜನತಾ ಪಕ್ಷ, ಈ ನಿಟ್ಟಿನಲ್ಲಿ ಈಶಾನ್ಯದ ರಾಜ್ಯಗಳಲ್ಲಿ ತನ್ನ ಬಾಹುಗಳನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.

Add Asianetnews Kannada as a Preferred SourcegooglePreferred

ಶನಿವಾರ ಮೂರು ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅತಿದೊಡ್ಡ ‘ಫಲಾನುಭವಿ’ಯಾಗಿ ಹೊರಹೊಮ್ಮಿದೆ. ತ್ರಿಪುರದಲ್ಲಿ 25 ವರ್ಷಗಳ ವಾಮರಂಗದ ಅಧಿಪತ್ಯ ಅಂತ್ಯಗೊಳಿಸಿ ಅನಾಯಾಸವಾಗಿ ಭಾರಿ ಬಹುಮತದೊಂದಿಗೆ ಕೇಸರಿ ಪಕ್ಷ ಜಯಿಸಿದೆ.

ಅತಂತ್ರ ಸ್ಥಿತಿ ತಲೆದೋರುತ್ತಿರುವ ನಾಗಾಲ್ಯಾಂಡ್‌ನಲ್ಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ತವಕದಲ್ಲಿದೆ. ಇನ್ನು ಮೇಘಾಲಯದಲ್ಲಿ ಅತಂತ್ರ ಸ್ಥಿತಿ ತಲೆದೋರಿದ್ದರೂ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಪುನಃ ಅಧಿಕಾರಕ್ಕೆ ಬರುವ ಹವಣಿಕೆಯಲ್ಲಿದೆ. ಆದರೆ ತ್ರಿಪುರ ಹಾಗೂ ನಾಗಾಲ್ಯಾಂಡ್‌ನಲ್ಲಿ ‘ಶೂನ್ಯ ಸಂಪಾದನೆ’ ಮಾಡಿರುವುದು ಕಾಂಗ್ರೆಸ್ ವರಿಷ್ಠರನ್ನು ಚಿಂತೆಗೀಡು ಮಾಡಿದೆ.

ಮೋದಿ ಕಹಳೆ: ಈ ಮಧ್ಯೆ, ದಿಲ್ಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಚುನಾವಣಾ ಗೆಲುವಿನ ಜೈತ್ರಯಾತ್ರೆ ಮುಂದುವರಿಸುವ ಕಹಳೆ ಊದಿದ್ದಾರೆ. ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ ಪಕ್ಷದ, ಹಿಂದೂ ಸಂಘಟನೆಗಳ ಸದಸ್ಯರ ಹತ್ಯೆಗಳಾಗುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿರುವ ಹೊತ್ತಿನಲ್ಲೇ ಕಾರ್ಯಕರ್ತರನ್ನು ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ.

‘ಈ ಗೆಲುವು ಕಾರ್ಯಕರ್ತರ ಗೆಲುವು, ವಿಚಾರಧಾರೆಗಳ ಗೆಲುವು. ಕೇರಳ, ತ್ರಿಪುರ ಮತ್ತು ಕರ್ನಾಟಕದಲ್ಲಿ ನಮ್ಮ ಯಾವ್ಯಾವ ಕಾರ್ಯಕರ್ತರು ಬಲಿದಾನ ಮಾಡಿದ್ದಾರೋ, ಅವರಿಗೆ ಈ ಜಯವನ್ನು ಸಮರ್ಪಿಸುತ್ತೇನೆ. ಇನ್ನು ದೇಶದಲ್ಲಿ ಕೇವಲ ಅಭಿವೃದ್ಧಿಯ ರಾಜಕೀಯ ಮತ್ತು ಸಾಧನೆಯ ರಾಜಕೀಯ ಮಾತ್ರವೇ ಮುಂದೆ ಸಾಗಲಿದೆ. ಇನ್ನು ಬಿಜೆಪಿ ಕರ್ನಾಟಕ, ಕೇರಳ ಮತ್ತು ಬಂಗಾಳದಲ್ಲಿ ತನ್ನ ಧ್ವಜವನ್ನು ಇನ್ನಷ್ಟು ಬಲಪಡಿಸಬೇಕಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರವನ್ನೇ ಮುಖ್ಯ ವಿಷಯವನ್ನಾಗಿ ಚುನಾವಣಾ ಪ್ರಚಾರ ಕೈಗೊಂಡಿರುವ ಬಿಜೆಪಿ ನಾಯಕರಿಗೆ ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ಅನುಮೋದನೆಯ ಸಂದೇಶ ನೀಡಿದ್ದಾರೆ.

ಬಿಜೆಪಿ ಬಲ ವಿಸ್ತರಣೆ: ತ್ರಿಪುರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಈಗ 20 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಂತಾಗಿದ್ದು, ನಾಗಾಲ್ಯಾಂಡ್‌ನಲ್ಲಿ ಮೈತ್ರಿ ಯಶಸ್ವಿ ಯಾದರೆ 21 ರಾಜ್ಯಗಳಲ್ಲಿ ಅಧಿಕಾರ ಹೊಂದಿದಂತಾಗುತ್ತದೆ. ಆದರೆ ಈ ಚುನಾವಣಾ ಫಲಿತಾಂಶದಿಂದ ಚಿಂತೆಗೀಡಾಗಿರುವುದು ಎಡರಂಗ ಹಾಗೂ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ತ್ರಿಪುರ ಹಾಗೂ ನಾಗಾಲ್ಯಾಂಡ್‌ನಲ್ಲಿ ಒಂದೂ ಸ್ಥಾನ ಗೆಲ್ಲದೇ ಧೂಳೀಪಟವಾಗಿದೆ. ಇನ್ನು ತ್ರಿಪುರವನ್ನು ಕಳೆದುಕೊಂಡ ಎಡರಂಗ ಇನ್ನು ಕೇವಲ ಕೇರಳದಲ್ಲಿ ಮಾತ್ರ ಅಧಿಕಾರ ಹೊಂದಿದಂತಾಗಿದೆ.

ಈ ಹಿಂದೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ಸಂಘ ಪರಿವಾರ, ಶನಿವಾರ ಫಲಿತಾಂಶ ಪ್ರಕಟಗೊಂಡ ಮೂರೂ ರಾಜ್ಯಗಳಲ್ಲಿ ತನ್ನ ಮ್ಯಾಜಿಕ್ ತೋರಿಸುವ ಮೂಲಕ ಮತ್ತೊಮ್ಮೆ ತನ್ನ ಬಲವನ್ನು ಸಾಬೀತುಪಡಿಸಿದೆ.

ತ್ರಿಪುರ (ಸ್ಥಾನ 59-ಬಹುಮತಕ್ಕೆ 31)

ಪಕ್ಷ 2018 - 2013

ಬಿಜೆಪಿ+ 43 - ೦

ಎಡರಂಗ 16 - 49

ಕಾಂಗ್ರೆಸ್ 0- 10

ನಾಗಾಲ್ಯಾಂಡ್ (ಸ್ಥಾನ 60-ಬಹುಮತಕ್ಕೆ 31)

ಪಕ್ಷ 2018 - 2013

ಬಿಜೆಪಿ+ 31 - 1

ಎನ್‌ಪಿಎಫ್+ 27 - 38

ಕಾಂಗ್ರೆಸ್ 0 - 8

ಇತರರು 2- 13

ಮೇಘಾಲಯ (ಸ್ಥಾನ 59 - ಬಹುಮತಕ್ಕೆ 31)

ಪಕ್ಷ 2018 - 2013

ಕಾಂಗ್ರೆಸ್ 21 - 28

ಎನ್‌ಪಿಪಿ 19 - 2

ಬಿಜೆಪಿ 2- 0

ಇತರರು 17 - 30