ಮಾಸಾಂತ್ಯ ಪ್ರಧಾನಿ ಮೋದಿ ನಡೆಸುವ ಆಕಾಶವಾಣಿಯ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಈ ಬಾರಿ ಬೆಂಗಳೂರಿನ 10ನೇ ತರಗತಿ ಬಾಲಕಿ ಚಿನ್ಮಯಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಂಸ್ಕೃತದಲ್ಲಿಯೇ ವ್ಯವಹರಿಸುವ ಮತ್ತೂರು ಗ್ರಾಮವನ್ನು ಪ್ರಸ್ತಾಪಿಸಿದ್ದು ವಿಶೇಷ. 

ಬೆಂಗಳೂರು (ಆ.27): ಸಂಸ್ಕೃತದ ಮಹತ್ವ ಬಗ್ಗೆ ಮೋದಿಗೆ ಸಂಸ್ಕೃತದಲ್ಲಿಯೇ ಪ್ರಶ್ನಿಸಿದ ಬೆಂಗಳೂರಿನ 10ನೇ ತರಗತಿ ಬಾಲಕಿಗೆ ಮೋದಿ ಸಂಸ್ಕೃತದಲ್ಲಿಯೇ ಉತ್ತರಿಸಿದ್ದಾರೆ.

Add Asianetnews Kannada as a Preferred SourcegooglePreferred

ವೈದಿಕ ಭಾಷಾ ಮಹತ್ವದ ಬಗ್ಗೆ ಮೋದಿ ಅವರನ್ನು ಚಿನ್ಮಯಿ ಎಂಬ ವಾಯ್ಸ್ ಮೆಸೇಜ್ ಮೂಲಕ ಪ್ರಶ್ನೆ ಕೇಳಿದ್ದಳು. ಪ್ರಧಾನಿ ಅವರ ಆಕಾಶವಾಣಿ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಈ ಪ್ರಶ್ನೆಗೆ ಉತ್ತರಿಸಿದ ಮೋದಿ, 'ಸಂಸ್ಕೃತದಲ್ಲಿ ಪ್ರಶ್ನೆ ಕೇಳಿದ್ದು ಅದ್ಭುತ,' ಎಂದು ಸಂಸ್ಕೃತದಲ್ಲಿಯೇ ಉತ್ತರ ಆರಂಭಿಸಿ, ಈ ದೈವೀ ಭಾಷೆಯ ಮಹತ್ವವನ್ನು ಹೇಳಿದರು. 

ಯಾರೀ ಚಿನ್ಮಯಿ?
ಶೃಂಗೇರಿ ಮೂಲದ ಲಕ್ಷ್ಮಿನಾರಾಯಣ ಭುವನಕೋಟಿ ಹಾಗೂ ಶ್ರೀವಿದ್ಯಾ ದಂಪತಿ ಪುತ್ರಿ ಈ ಚಿನ್ಮಯಿ. ಗಿರಿನಗರದ ಭಾರತಿ ಶಾಲಾ ವಿದ್ಯಾರ್ಥಿನಿ. ಇವರ ಮನೆಯಲ್ಲಿ ಪೋಷಕರು ಹಾಗೂ ಸಹೋದರ ಚಿದ್ಗಣಪತಿ ಸೇರಿ ಎಲ್ಲರೂ ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ. ತಂದೆ ಸಂಸ್ಕೃತ ವಿದ್ವಾಂಸರಾಗಿದ್ದು, ಭಾಷೆಯನ್ನು ಅಭಿವೃದ್ಧಿಪಡಿಸುತ್ತಿರುವ ಸಂಸ್ಕೃತ ಭಾರತಿಯೊಂದಿಗೆ ಕಳೆದ 30 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತೂರನ್ನು ಪ್ರಶಂಸಿದ ಮೋದಿ:
ರಕ್ಷಾ ಬಂಧನ ದಿನವಾದ ಶ್ರಾವಣ ಪೂರ್ಣಿಮೆಯನ್ನು ‘ಸಂಸ್ಕೃತ ದಿನ’ ಎಂದೂ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ‘ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮತ್ತೂರಿನ ಜನರು ಈಗಲೂ ಸಂಸ್ಕೃತವನ್ನು ತಮ್ಮ ದೈನಂದಿನ ವ್ಯಾವಹಾರಿಕ ಭಾಷೆಯನ್ನಾಗಿ ಬಳಸುತ್ತಾರೆ’ ಎಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದಾರೆ. 

ಈ ಮೂಲಕ ಈ ಪುರಾತನ ಭಾಷೆಯನ್ನು ರಕ್ಷಿಸುವಲ್ಲಿ ಮತ್ತೂರಿನ ಪಾತ್ರ ಹಿರಿದು ಎಂದು ಮೋದಿ ಕೊಂಡಾಡಿದ್ದಾರೆ. ಭಾನುವಾರ ತಮ್ಮ ಮಾಸಿಕ ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಭಾಷಣದಲ್ಲಿ ಮಾತನಾಡಿದ ಮೋದಿ ಅವರು, ‘ರಕ್ಷಾ ಬಂಧನ ದಿನವನ್ನು ಸಂಸ್ಕೃತ ದಿನ ಎಂದೂ ಆಚರಿಸಲಾಗುತ್ತದೆ. ಈ ಪುರಾತನ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ಹಾಗೂ ಈ ಪುರಾತನ ಪರಂಪರೆಯನ್ನು ರಕ್ಷಿಸಿ ಇನ್ನೂ ಜನಮಾನಸದಲ್ಲಿ ಪಸರಿಸಲು ಶ್ರಮಿಸುತ್ತಿ ರುವ ಎಲ್ಲರಿಗೂ ಅಭಿನಂದನೆಗಳು’ ಎಂದರು.

‘ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದಲ್ಲಿ ಜೀವನದ ಪ್ರತಿ ಅಂಶಗಳೂ ಅಡಕವಾಗಿವೆ. ವಿಜ್ಞಾನ-ತಂತ್ರಜ್ಞಾನ, ಕೃಷಿ, ಆರೋಗ್ಯ, ಗಣಿತ, 
ನಿರ್ವಹಣೆ, ಆರ್ಥಿಕತೆ, ಪರಿಸರ- ಹೀಗೆ ಪ್ರತಿ ವಿಭಾಗವನ್ನೂ ಸಂಸ್ಕೃತದಲ್ಲಿನ ಕೃತಿಗಳು ಮುಟ್ಟಿವೆ. ವೇದಗಳಲ್ಲಿ ಹಲವು ಮಂತ್ರಗಳಿದ್ದು, ಅವು ಈಗ ಜಗತ್ತು ಎದುರಿಸುತ್ತಿರುವ ತಾಪಮಾನ ಏರಿಕೆ ಯನ್ನು ನಿಯಂತ್ರಿ ಸುವ ಉಪಾಯವನ್ನು ನೀಡುತ್ತವೆ’ ಎಂದು ಕೊಂಡಾಡಿದರು.