2014ರ ಲೋಕಸಭೆ ಅಧಿವೇಶನ ಅಂತ್ಯ| ಪ್ರಸಕ್ತ ಲೋಕಸಭೆಯ ಕೊನೆಯ ಭಾಷಣ ಮಾಡಿದ ಪ್ರಧಾನಿ ಮೋದಿ| ರಾಹುಲ್ ಗಾಂಧಿ ಅವರನ್ನು ವ್ಯಂಗ್ಯದ ಮಾತುಗಳಿಂದ ಚುಚ್ಚಿದ ಮೋದಿ| ‘ಪ್ರೀತಿಯ ಅಪ್ಪುಗೆ ಮತ್ತು ಬಲವಂತದ ಅಪ್ಪುಗೆ ನಡುವಿನ ವ್ಯತ್ಯಾಸ ತಿಳಿಯಿತು'| ತಮ್ಮ ಕೊನೆಯ ಭಾಷಣದಲ್ಲಿ ಸದನವನ್ನು ನಗೆಗಡಲಲ್ಲಿ ತೇಲಿಸಿದ ಪ್ರಧಾನಿ|
ನವದೆಹಲಿ(ಫೆ.13): ಇಂದು ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನ ಮುಕ್ತಾಯವಾಗಿದ್ದು, ಈ ಮೂಲಕ 2014ರ ಲೋಕಸಭೆಯ ಕೊನೆಯ ಸದನ ಕಲಾಪ ಅಂತ್ಯ ಕಂಡಿದೆ.
ಈ ವೇಳೆ ಪ್ರಸಕ್ತ ಲೋಕಸಭೆಯ ತಮ್ಮ ಕೊನೆಯ ಭಾಷಣ ಮಾಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಕಾರ್ಯವೈಖರಿ ತಮಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಕಳೆದ 5 ವರ್ಷಗಳಲ್ಲಿ ಭಾರತದ ಚಹರೆಯನ್ನು ಬದಲಿಸುವಲ್ಲಿ ನಾವು ಯಶಶ್ವಿಯಾಗಿದ್ದು, ಇದಕ್ಕಾಗಿ ನಾನು ಇಡೀ ಸದನಕ್ಕೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ನುಡಿದರು.
ಇನ್ನು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ವ್ಯಂಗ್ಯದ ಬಾಣ ಬಿಟ್ಟ ಪ್ರಧಾನಿ ಮೋದಿ, ನಾನು ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶ ಮಾಡಿದ್ದು, ನಾನು ಬಹಳಷ್ಟು ವಿಷಯಗಳನ್ನು ಕಲಿತೆ ಎಂದು ಹೇಳಿದರು. ವಿಶೇಷವಾಗಿ ಪ್ರೀತಿಯ ಅಪ್ಪುಗೆ ಮತ್ತು ಬಲವಂತದ ಅಪ್ಪುಗೆ ನಡುವಿನ ವ್ಯತ್ಯಾಸ ಏನೆಂದು ತಿಳಿದಿದ್ದು ಇಲ್ಲಿ ಬಂದ ಮೇಲೆಯೇ ಎಂದು ಮೋದಿ ಚುಚ್ಚಿದರು.
ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ತಮ್ಮ ಭಾಷಣದ ಬಳಿಕ ಪ್ರಧಾನಿ ಮೋದಿ ಅವರತ್ತ ತೆರಳಿ ಅವರನ್ನು ಅಪ್ಪಿಕೊಂಡಿದ್ದರು. ಇದಕ್ಕೆ ಇಂದು ಪ್ರಧಾನಿ ವ್ಯಂಗ್ಯದ ಮೂಲಕ ಪ್ರತ್ಯುತ್ತರ ನೀಡಿದರು.
