ಸುಪ್ರೀಂಕೋರ್ಟ್ ಗೇ ಬೆದರಿಕೆ ಒಡ್ಡುತ್ತಾರಾ : ಪಿಣರಾಯಿ ವಿಜಯನ್
ಶಬರಿಮಲೆ ಪ್ರತಿಭಟನಾಕಾರರಿಗೆ ಬೆಂಬಲ ನೀಡಿ ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತಿರುವನಂತಪುರಂ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಬರಿಮಲೆ ಪ್ರತಿಭಟನಾಕಾರರೊಂದಿಗೆ ಬಿಜೆಪಿ ಬಂಡೆಯಂತೆ ನಿಲ್ಲುತ್ತದೆ ಎನ್ನುವ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾರಿಗೆ ಅವರು ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ನಿಮ್ಮ ಉದ್ದೇಶ ಸುಪ್ರೀಂ ಕೋರ್ಟ್ ಗೆ ಬೆದರಿಕೆ ಒಡ್ಡುವುದಾ ಎಂದು ಪ್ರಶ್ನೆ ಮಾಡಿದ್ದಾರೆ. ಅಮಿತ್ ಶಾ ಅವರ ಹೇಳಿಕೆಯಿಂದ ಕೇರಳ ಸರ್ಕಾರದ ಯತ್ನವನ್ನು ತಡೆಯುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ನಿಮ್ಮ ಯತ್ನಗಳು ಏನೇ ಇದ್ದರು ಅದನ್ನು ಗುಜರಾತಿನಲ್ಲಿ ಮಾಡಿಕೊಳ್ಳಿ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಮಹಿಳಾ ಪ್ರವೇಶಕ್ಕೆ ಹಲವು ರೀತಿಯ ಯತ್ನಗಳು ನಡೆದಿದ್ದರೂ ಕೂಡ ಯಾವ ಮಹಿಳೆಯೂ ಕೂಡ ದೇಗುಲವನ್ನು ಪ್ರವೇಶ ಮಾಡಲಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಪ್ರವೇಶವನ್ನು ವಿರೋಧಿಸಿ ಹಲವು ರೀತಿಯ ಪ್ರತಿಭಟನೆ ನಡೆದಿದೆ. ಅತ್ಯಧಿಕ ಸಂಖ್ಯೆಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು. ಇದರಿಂದ ಪ್ರತಿಭಟನಾಕಾರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.