ತುಂಡಾದ ಕಾಲು ತಲೆದಿಂಬಾಗಿ ಇಟ್ಟರು!
ಉತ್ತರ ಪ್ರದೇಶದಲ್ಲಿ ವೈದಕೀಯ ನಿರ್ಲಕ್ಷ್ಯದ ಪ್ರಕರಣಗಳು ಮುಂದುವರಿದಿದ್ದು, ಅಪಘಾತವೊಂದರಲ್ಲಿ ತುಂಡಾಗಿದ್ದ ವ್ಯಕ್ತಿಯೊಬ್ಬನ ಕಾಲನ್ನು ತಲೆದಿಂಬಾಗಿ ಬಳಸಿರುವ ಆಘಾತಕಾರಿ ಘಟನೆ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಲಖನೌ: ಉತ್ತರ ಪ್ರದೇಶದಲ್ಲಿ ವೈದಕೀಯ ನಿರ್ಲಕ್ಷ್ಯದ ಪ್ರಕರಣಗಳು ಮುಂದುವರಿದಿದ್ದು, ಅಪಘಾತವೊಂದರಲ್ಲಿ ತುಂಡಾಗಿದ್ದ ವ್ಯಕ್ತಿಯೊಬ್ಬನ ಕಾಲನ್ನು ತಲೆದಿಂಬಾಗಿ ಬಳಸಿರುವ ಆಘಾತಕಾರಿ ಘಟನೆ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಮೊರಾನಿಪುರ ಪ್ರದೇಶಲ್ಲಿ 25 ವರ್ಷದ ವ್ಯಕ್ತಿಯೊಬ್ಬ ರಸ್ತೆ ಅಪಘಾತಕ್ಕೀಡಾಗಿ ಆತನ ಕಾಲು ತುಂಡಾಗಿತ್ತು. ಒಂದೂವರೆ ಗಂಟೆಗಳ ಬಳಿಕ ಆತನನ್ನು ಚಿಕಿತ್ಸೆಗಾಗಿ ಝಾನ್ಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತನಿಗೆ ಕಾಲನ್ನು ಮರು ಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಬಳಿಕ ಆತನನ್ನು ಸ್ಟೆ್ರಚರ್ ಮೇಲೆ ಮಲಗಿಸಿ, ತುಂಡಾದ ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು.
ಆಘಾತಕಾರಿ ಸಂಗತಿಯೆಂದರೆ, ಆತನಿಗೆ ಪ್ರಜ್ಞೆ ಇರುವಾಗಲೇ ತುಂಡಾಗಿ ರಕ್ತ ಸುರಿಯುತ್ತಿದ್ದ ಕಾಲನ್ನು ತಲೆದಿಂಬನ್ನಾಗಿ ಬಳಸಲಾಗಿದೆ. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇತರ ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿ ಸಮ್ಮುಖದಲ್ಲೇ 2 ಗಂಟೆಗಳ ಕಾಲ ಕಾಲು ತುಂಡಾದ ವ್ಯಕ್ತಿಯನ್ನುಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಸಂತ್ರಸ್ತನ ಕುಟುಂಬದ ಸದಸ್ಯರು ತುಂಡಾದ ಕಾಲನ್ನು ತಲೆಯ ಅಡಿಯಿಂದ ತೆಗೆಯುವಂತೆ ಕೋರಿಕೊಂಡಿದ್ದರೂ ಅದಕ್ಕೆ ಸ್ಪಂದಿಸದೇ ವೈದ್ಯರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಳಿಕ ಆತನನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಝಾನ್ಸಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ಲಕ್ಷ್ಯಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.