ದುಡ್ಡು ಕೊಟ್ಟು ರದ್ದಾದ ನೋಟು ಖರೀದಿಸಿದ ಪಾಕ್
ಪಾಕಿಸ್ತಾನದ ಖೋಟಾನೋಟು ದಂಧೆ ಬುಡಮೇಲು ಉದ್ದೇಶದಿಂದ ಮೋದಿ ಸರ್ಕಾರ ಅಪನಗದೀಕರಣ ಯೋಜನೆ ಜಾರಿಗೆ ತಂದಿತ್ತು. ಆದರೆ ಈಗ ಅದನ್ನೇ ಬಳಸಿಕೊಂಡು ತನ್ನ ಖೋಟಾನೋಟು ದಂಧೆಯನ್ನು ಪಾಕ್ ಹುಲುಸಾಗಿ ಬೆಳೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ನವದೆಹಲಿ: ಪಾಕಿಸ್ತಾನದ ಖೋಟಾನೋಟು ದಂಧೆ ಬುಡಮೇಲು ಉದ್ದೇಶದಿಂದ ಮೋದಿ ಸರ್ಕಾರ ಅಪನಗದೀಕರಣ ಯೋಜನೆ ಜಾರಿಗೆ ತಂದಿತ್ತು. ಆದರೆ ಈಗ ಅದನ್ನೇ ಬಳಸಿಕೊಂಡು ತನ್ನ ಖೋಟಾನೋಟು ದಂಧೆಯನ್ನು ಪಾಕ್ ಹುಲುಸಾಗಿ ಬೆಳೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಭಾರತದಲ್ಲಿ ಚಲಾವಣೆ ಕಳೆದುಕೊಂಡಿರುವ 500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ಖರೀದಿ ಮಾಡುತ್ತಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ಗಳು ಅದನ್ನು ನೇಪಾಳಕ್ಕೆ ಸಾಗಿಸುತ್ತಿದ್ದಾರೆ. ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಂಡದ ಬೆಂಬಲ ಪಡೆದು, ಆ ನೋಟುಗಳನ್ನು ಕರಾಚಿ ಹಾಗೂ ಪೇಶಾವರಕ್ಕೆ ಸಾಗಣೆ ಮಾಡಲಾಗುತ್ತದೆ. ಅಲ್ಲಿರುವ ನೋಟು ಮುದ್ರಣ ಘಟಕಗಳಲ್ಲಿ ರದ್ದಾದ ನೋಟುಗಳಲ್ಲಿರುವ ಭದ್ರತಾ ದಾರ ಹೊರಕ್ಕೆ ತೆಗೆಯ ಲಾಗುತ್ತದೆ.
ನಂತರ 500, 2000 ಹಾಗೂ 50 ರು. ಮುಖಬೆಲೆಯ ಖೋಟಾನೋಟುಗಳಿಗೆ ಈ ಭದ್ರತಾ ದಾರ ಅಳವಡಿಕೆ ಮಾಡಿ, ದುಬೈ, ಬಾಂಗ್ಲಾದೇಶಕ್ಕೆ ಕಳ್ಳ ಸಾಗಣೆ ಮಾಡಲಾಗುತ್ತಿದೆ. ಇದಕ್ಕೂ ದಾವೂದ್ ಕಂಪನಿ ಸಹಾಯ ಮಾಡುತ್ತಿದೆ ಎಂದು ತನಿಖಾಧಿಕಾರಿಗಳ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.