ಉಗ್ರರ ಶವಗಳನ್ನು ಕದ್ದುಮುಚ್ಚಿ ಸಾಗಿಸಿದರು... ಪಾಕಿಸ್ತಾನದ ಸುಳ್ಳನ್ನು ಬೆತ್ತಲೆಗೊಳಿಸಿದ ಪಾಕ್ ಪೊಲೀಸ್ ಅಧಿಕಾರಿ
ನವದೆಹಲಿ(ಅ. 05): ಭಾರತದ ಸೇನಾ ಪಡೆಗಳು ಯಾವುದೇ ಸರ್ಜಿಕಲ್ ಕಾರ್ಯಾಚರಣೆ ನಡೆಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಿರುವುದು ಸುಳ್ಳು ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಭಾರತೀಯ ಸೇನೆಯು ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಕ್ಯಾಂಪ್'ಗಳನ್ನು ಧ್ವಂಸ ಮಾಡಿದ ಘಟನೆಯನ್ನು ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರೇ ಒಪ್ಪಿಕೊಂಡಿದ್ದಾರೆ. ಸಿಎನ್'ಎನ್ ನ್ಯೂಸ್18 ವಾಹಿನಿಯ ವರದಿಗಾರರೊಬ್ಬರು ಮಾರುವೇಷದಲ್ಲಿ ಹೋಗಿ ಗುಲಾಂ ಅಕ್ಬರ್ ಎಂಬ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದಾಗ ಎಲ್ಲ ವಿಷಯವೂ ಬೆಳಕಿಗೆ ಬಂದಿದೆ. ಮೀರ್'ಪುರ್ ರೇಂಜ್'ನ ಎಸ್'ಪಿ ಗುಲಾಂ ಅಕ್ಬರ್ ಹೇಳುವ ಪ್ರಕಾರ ಭಾರತದ ಕಮಾಂಡೋ ಆಪರೇಷನ್'ನಲ್ಲಿ 12 ಉಗ್ರಗಾಮಿಗಳು ಹತ್ಯೆಯಾಗಿರುವುದು ನಿಜ. ಜೊತೆಗೆ ಐವರು ಪಾಕ್ ಸೈನಿಕರೂ ಈ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದನ್ನು ಅಕ್ಬರ್ ದೃಢಪಡಿಸಿದ್ದಾರೆ.
ಸೆ.29-30ರ ರಾತ್ರಿಯ ವೇಳೆ ಭಾರತದ ಸೇನಾ ಪಡೆ ಬಹಳ ರಹಸ್ಯವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿಭಾಗದೊಳಗೆ ನುಗ್ಗಿ ಭಯೋತ್ಪಾದಕರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಪಾಕಿಸ್ತಾನದ ಉಗ್ರರಿಗಾಗಲೀ, ಸೈನಿಕರಿಗಾಗಲೀ ಇದರ ಸುಳಿವು ಸಿಕ್ಕಿರಲಿಲ್ಲ. ಭಾರತೀಯ ಯೋಧರು ದಾಳಿ ನಡೆಸಿ ವಾಪಸ್ಸಾದ ಬಳಿಕ ಎಚ್ಚೆತ್ತಕೊಂಡ ಪಾಕ್ ಸೇನೆ ದಾಳಿಗೆ ತುತ್ತಾದ ಪ್ರದೇಶಗಳನ್ನು ಕೂಡಲೇ ಸುತ್ತುವರೆದು ಮೃತ ದೇಹಗಳನ್ನು ಸ್ಥಳಾಂತರ ಮಾಡಿದರು. ಹಲವು ಉಗ್ರರ ಶವಗಳನ್ನು ಗ್ರಾಮಗಳಲ್ಲು ಹೂತುಬಿಟ್ಟರು. ಪಾಕ್ ಪೊಲೀಸ್ ಅಧಿಕಾರಿ ಗುಲಾಂ ಅಕ್ಬರ್ ಈ ಎಲ್ಲ ವಿಷಯವನ್ನು ತಿಳಿಸಿರುವುದನ್ನು ನ್ಯೂಸ್18 ವಾಹಿನಿ ದಾಖಲು ಮಾಡಿಕೊಂಡಿದೆ.