ವಕೀಲರ ಬಗ್ಗೆ ಸಿಟ್ಟೆದ್ದು ಕೋರ್ಟ್ನಲ್ಲಿ ಸ್ವತಃ ತಾವೇ ವಾದಿಸಿದ ಚಿದು!
ಸಿಬಿಐ ವಕೀಲರ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್| ಸೆ.3ರವರೆಗೂ ಚಿದಂಬರಂ ಸಿಬಿಐ ವಶಕ್ಕೆ| ಸಿಟ್ಟಿಗೆದ್ದು ತಾವೇ ವಾದಿಸಿದ ಚಿದು|
ನವದೆಹಲಿ[ಆ.31]: ಐಎನ್ಎಕ್ಸ್ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ದೆಹಲಿ ನ್ಯಾಯಾಲಯ ಮತ್ತೆ 3 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ಆದರೆ ವಿಚಾರಣೆ ವೇಳೆ ಸಿಬಿಐ ವಕೀಲರ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್, ಇನ್ನೂ ಎಷ್ಟುದಿನ ಅವರನ್ನು ವಿಚಾರಣೆಗೆ ಗುರಿಪಡಿಸಬೇಕು. ಮೊದಲು 5 ದಿನ ಕೇಳಿದ್ದೀರಿ. ಮೊದಲ ಬಾರಿಯೇ 15 ದಿನಗಳ ವಶಕ್ಕೆ ನೀಡುವಂತೆ ಏಕೆ ಕೇಳಲಿಲ್ಲ? ಅವರನ್ನೇನು ಒಂದು ತಿಂಗಳ ಕಾಲ ವಿಚಾರಣೆಗೆ ಗುರಿಪಡಿಸುವಿರೇ ಎಂದು ಪ್ರಶ್ನಿಸಿತು.
INX ಮೀಡಿಯಾ ಹಗರಣ: ಮಾಜಿ ಹಣಕಾಸು ಸಚಿವ ಚಿದುಗೆ ಸಂಕಷ್ಟ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಸ್ಪಷ್ಟನೆ ನೀಡಿದ ಸಿಬಿಐ ಪರ ವಕೀಲರು, ಚಿದಂಬರಂ ಅವರನ್ನು ನಿತ್ಯವೂ 8-10 ತಾಸು ಪ್ರಶ್ನೆಗೆ ಗುರಿಪಡಿಸಲಾಗುತ್ತಿದೆ. ಆದರೆ ಅವರು ಸೂಕ್ತ ಉತ್ತರ ನೀಡದೇ ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ ಇನ್ನಷ್ಟು ವಿಚಾರಣೆಯ ಅವಶ್ಯಕತೆ ಇದೆ ಎಂದು ಹೇಳಿದರು.
ಕೊನೆಗೆ ಸೆ.2ರವರೆಗೆ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿತು. ಇದೇ ವೇಳೆ ಸಿಬಿಐ ವಾದಕ್ಕೆ ತಮ್ಮ ಪರ ವಕೀಲರು ಸೂಕ್ತ ಪ್ರತ್ಯುತ್ತರ ನೀಡುತ್ತಿಲ್ಲ ಎಂದು ಅಸಮಾಧಾನಗೊಂಡ ಚಿದು, ಕಟಕಟೆಯಲ್ಲಿ ತಾವೇ ಎದ್ದುನಿಂತ ಕೆಲ ಕಾಲ ತಮ್ಮ ಪರ ವಾದ ಮಂಡಿಸಿದ ಘಟನೆಯೂ ಗುರುವಾರ ನಡೆಯಿತು.