ಅವಕಾಶವಾದಿ ಬಿಜೆಪಿ-ಪಿಡಿಪಿ ಮೈತ್ರಿಯಿಂದ ಕಾಶ್ಮೀರಕ್ಕೆ ಬೆಂಕಿ: ರಾಹುಲ್ ಗಾಂಧಿ
ಅವಕಾಶವಾದಿ ಬಿಜೆಪಿ-ಪಿಡಿಪಿ ಮೈತ್ರಿಯಿಂದ ಕಾಶ್ಮೀರಕ್ಕೆ ಬೆಂಕಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ
ದುರಂಹಕಾರದ ಮೈತ್ರಿ ಯಾವತ್ತೂ ಯಶಸ್ವಿಯಾಗುವುದಿಲ್ಲ
ಬಿಜೆಪಿ-ಟಿಡಿಪಿ ತಪ್ಪು ನೀತಿಗಳಿಂದ ಕಣಿವೆ ಬೆಂಕಿ ಬಿದ್ದಿದೆ.
ನವದೆಹಲಿ(ಜೂ.19): ಅವಕಾಶವಾದಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹೊತ್ತಿ ಉರಿಯುವಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಣಿವೆ ರಾಜ್ಯದ ಮೈತ್ರಿ ಸರ್ಕಾರದಿಂದ ಹೊರ ಬಂದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿರುವ ರಾಹುಲ್, ಕಾಶ್ಮೀರದಲ್ಲಿ ಹಲವು ಮುಗ್ಧರು, ವೀರ ಯೋಧರು ಸಾವನ್ನಪ್ಪುತ್ತಿದ್ದಾರೆ. ಕೇಂದ್ರ ಸರ್ಕಾರದಡಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದರೂ ಈ ಸಾವಿನ ಸರಣಿ ಮುಂದುವರೆಯಲಿದೆ ಎಂದಿದ್ದಾರೆ.
ಅಸಮರ್ಥತೆ, ದುರಹಂಕಾರ ಮತ್ತು ದ್ವೇಷದ ಮೈತ್ರಿ ಯಾವತ್ತೂ ಯಶಸ್ವಿಯಾಗುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ. ತಮ್ಮ ತಪ್ಪು ನೀತಿಗಳಿಂದ ಕಣಿವೆಗೆ ಬೆಂಕಿ ಇಟ್ಟ ಈ ಮೈತ್ರಿ ಪಕ್ಷಗಳು ಇದೀಗ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇದೇ ವೇಳೆ ಯಾವುದೇ ಕಾರಣಕ್ಕೂ ಪಿಡಿಪಿ ಜೊತೆ ಸೇರಿ ಕಣಿವೆಯಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮುಂದಾಗುವುದಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಪಿಡಿಪಿ ಜೊತೆ ಯಾವುದೇ ಮೈತ್ರಿಗೆ ಕಾಂಗ್ರೆಸ್ ಸಿದ್ದವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.