ದಿಲ್ಲಿಯಲ್ಲಿ ಮಿತಿ ಮೀರಿದೆ ವಾಯುಮಾಲಿನ್ಯ | ವಾಯುಮಾಲಿನ್ಯ ತಡೆಗೆ ಅನೇಕ ಯೋಜನೆಗಳು ಜಾರಿ | ಮತ್ತೆ ಬರಲಿದೆ ಸಮ-ಬೆಸ ಯೋಜನೆ 

ನವದೆಹಲಿ (ಡಿ. 26):  ರಾಷ್ಟ್ರ ರಾಜಧಾನಿಯಲ್ಲಿ ನಿರಂತರ 4ನೇ ದಿನವೂ ವಾಯುಗುಣಮಟ್ಟ‘ಗಂಭೀರ’ ಪ್ರಮಾಣದಲ್ಲೇ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಮತ್ತೆ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜಧಾನಿಯಲ್ಲಿ ಮಂಗಳವಾರ ವಾಯುಗುಣಮಟ್ಟ ಸೂಚ್ಯಂಕ 416 ದಾಖಲಿಸಿತು. ಇದು ಗಂಭೀರ ಪ್ರಮಾಣದ ಸಂಕೇತ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ದಿಲ್ಲಿಯಲ್ಲಿ ವಾಯುಮಾಲಿನ್ಯ ತಡೆಗಾಗಿ ವೃಕ್ಷಗಳನ್ನು ನೆಡಲಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರಚುರಪಡಿಸಲು 3 ಸಾವಿರ ಬಸ್‌ಗಳನ್ನು ಖರೀದಿಸಲಾಗಿದೆ. ಮೆಟ್ರೋದ ಅತಿ ದೊಡ್ಡ ಹಂತಕ್ಕೆ ಅನುಮೋದನೆ ನೀಡಲಾಗಿದೆ. ಅಗತ್ಯ ಬಿದ್ದರೆ ಸಮ-ಬೆಸ ಸಂಚಾರ ವ್ಯವಸ್ಥೆಯನ್ನು ಪುನಃ ಜಾರಿಗೆ ತರುತ್ತೇವೆ. ಪ್ರತಿ ವ್ಯಕ್ತಿ ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದರು.

ಈ ಹಿಂದೆ 2016ರಲ್ಲಿ ಸಮ-ಬೆಸ ಸಂಚಾರ ವ್ಯವಸ್ಥೆ ಕೆಲವು ದಿನಗಳ ಮಟ್ಟಿಗೆ ಜಾರಿಯಲ್ಲಿತ್ತು. ಸಮಸಂಖ್ಯೆಯಿಂದ ಅಂತ್ಯವಾಗುವ ನಂಬರ್‌ಪ್ಲೇಟ್‌ ಉಳ್ಳ ವಾಹನಗಳು ಸಮಸಂಖ್ಯೆಯ ದಿನಾಂಕದಂದು ಹಾಗೂ ಬೆಸಸಂಖ್ಯೆಯಿಂದ ಅಂತ್ಯವಾಗುವ ನಂಬರ್‌ಪ್ಲೇಟ್‌ ಉಳ್ಳ ವಾಹನಗಳು ಬೆಸಸಂಖ್ಯೆಯ ದಿನಾಂಕದಂದು ಸಂಚರಿಸಬೇಕು ಎಂಬುದೇ ಸಮ-ಬೆಸ ನಿಯಮ.