ಗಾಂಧೀ ಕುಟುಂಬದವರು ಅಧ್ಯಕ್ಷರಾಗದೇ ಇದ್ದರೂ ಕಾಂಗ್ರೆಸ್‌ ಉಳಿಯಬಲ್ಲದು| ಹುದ್ದೆ ಬೇಡದಿದ್ದರೂ, ಪಕ್ಷದಲ್ಲಿ ಕುಟುಂಬ ಸಕ್ರಿಯವಾಗಿರಬೇಕು| ಸಂಕಷ್ಟಬಂದಾಗ ಗಾಂಧೀ- ನೆಹರೂ ಕುಟುಂಬ ಧಾವಿಸಬೇಕು| ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಪ್ರತಿಪಾದನೆ

ನವದೆಹಲಿ[ಜೂ.24]: ಪಕ್ಷದ ಅಧ್ಯಕ್ಷ ಹುದ್ದೆಗೆ ಗಾಂಧೀ- ನೆಹರು ಕುಟುಂಬೇತರ ವ್ಯಕ್ತಿ ಆಯ್ಕೆಗೆ ಕಾಂಗ್ರೆಸ್‌ನೊಳಗೆ ವಿರೋಧ ವ್ಯಕ್ತವಾಗಿರುವಾಗಲೇ, ಗಾಂಧೀ- ನೆಹರು ಕುಟುಂಬದ ಸದಸ್ಯರು ಪಕ್ಷದ ಅಧ್ಯಕ್ಷರಾಗದೇ ಇದ್ದರೂ, ಪಕ್ಷ ಉಳಿಯಬಲ್ಲದು ಎಂದು ಪಕ್ಷದ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನವೊಂದನ್ನು ನೀಡಿರುವ ಅಯ್ಯರ್‌ ‘ಗಾಂಧೀ- ನೆಹರು ಕುಟುಂಬೇತರರು ಪಕ್ಷದ ಅಧ್ಯಕ್ಷರಾಗಬಹುದು. ಆದರೆ ಗಾಂಧೀ ಕುಟುಂಬ ಸಂಘಟನೆಯೊಳಗೆ ಸಕ್ರಿಯರಾಗಿರಬೇಕು’ ಎಂದು ಹೇಳಿದ್ದಾರೆ.

‘ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆದರೆ ಒಳ್ಳೆಯದು. ಆದರೆ ಕೆಲವೊಮ್ಮೆ ರಾಹುಲ್‌ ಅವರ ಅಭಿಪ್ರಾಯಗಳನ್ನೂ ನಾವು ಗೌರವಿಸಲೇಬೇಕು. ಪಕ್ಷದ ಅಧ್ಯಕ್ಷ ಹುದ್ದೆಯನ್ನು ಗಾಂಧೀ- ನೆಹರೂ ಕುಟುಂಬ ವಹಿಸಿಕೊಳ್ಳದೇ ಇದ್ದರೂ, ಪಕ್ಷದ ಉಳಿಯಬಲ್ಲದು. ಆದರೆ ಇದಕ್ಕಾಗಿ ಗಾಂಧೀ ಕುಟುಂಬ ಸಂಘಟನೆಯಲ್ಲಿ ಸಕ್ರಿಯರಾಗಿರಬೇಕು. ಸಂಘಟನೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಎದುರಾದಲ್ಲಿ ಅವರು ಪರಿಹಾರ ಸೂಚಿಸಬೇಕು ಎಂಬುದು ನನ್ನ ಅಭಿಪ್ರಾಯ. ಈ ಹಿಂದೆಯೂ ಗಾಂಧೀ- ನೆಹರೂ ಕುಟುಂಬದವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ಪಕ್ಷವನ್ನು ಮುನ್ನಡೆಸಿದ ಉದಾಹರಣೆ ನಮ್ಮ ಮುಂದಿದೆ ’ ಎಂದು ಅಯ್ಯರ್‌ ಹೇಳಿದ್ದಾರೆ.

ಹೊಸ ಅಧ್ಯಕ್ಷರ ಹುಡುಕಲು ರಾಹುಲ್‌ ಪಕ್ಷದ ನಾಯಕರಿಗೆ ಒಂದು ತಿಂಗಳ ಗಡುವು ನೀಡಿದ್ದಾರೆ. ಆದರೆ ಸ್ವತಃ ರಾಹುಲ್‌ ಅವರೇ ಹುದ್ದೆಯಲ್ಲಿ ಮುಂದುವರೆಬೇಕೆಂಬುದು ಪಕ್ಷದಲ್ಲಿನ ಬಹುತೇಕ ನಾಯಕರ ಒತ್ತಾಸೆ ಎಂದು ಹೇಳಿದ್ದಾರೆ.