ಇಣುಕುತ್ತಿದ್ದಾರೆ ಸೂಪರ್ ಸಿಎಂಗಳು: ಆಡಳಿತದ್ದು ಇದೆನಾ ಗೋಳು?
ಸರ್ಕಾರದಲ್ಲಿ ಸೂಪರ್ ಸಿಎಂ ಗಳದ್ದೇ ದರ್ಬಾರ್?
ಸರ್ಕಾರದ ಕೆಲಸಗಳಲ್ಲೂ ಕುಟುಂಬಸ್ಥರ ಹಸ್ತಕ್ಷೇಪ
ರೇವಣ್ಣ ಆಯ್ತು, ಈಗ ಬಾಲಕೃಷ್ಣೇ ಗೌಡರ ಸರದಿ
ಜೆಡಿಎಸ್ ನ ಸಚಿವರಿಗಿಲ್ಲ ಪಿಎ ನೇಮಕ ಸ್ವಾತಂತ್ರ್ಯ.
ಪದ್ಮನಾಭನಗರದಿಂದಲೇ ಬರಬೇಕು ಗ್ರೀನ್ ಸಿಗ್ನಲ್
ನೇಮಕಾತಿಗೆ ಬಾಲಕೃಷ್ಣೇಗೌಡರ ಒಪ್ಪಿಗೆ ಬೇಕು
ಹಾಸನ ,ಮಂಡ್ಯ ದ ಅಧಿಕಾರಿಗಳಿಗೆ ಮಣೆ?
ಬೆಂಗಳೂರು(ಜು.3): ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಆಡಳಿತದಲ್ಲಿ ಹಸ್ತಕ್ಷೇಪವೂ ಜಾಸ್ತಿಯಾಗುತ್ತಿದೆ ಎಂಬುದು ಮೊದಲಿನಿಂದಲೂ ಕೇಳಿ ಬಂದ ಆರೋಪ. ಅದಕ್ಕೆ ವಿವಿಧ ಇಲಾಖೆಗಳಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಹೋದರ, ಸಚಿವ ಎಚ್.ಡಿ.ರೇವಣ್ಣ ಮೂಗು ತೂರಿಸುತ್ತಾರೆ ಎಂಬ ಆರೋಪ ಕೇಳಿ ಬಂದಿದ್ದೇ ಸಾಕ್ಷಿ.
ರೇವಣ್ಣ ಅವರ ವಿಚಾರ ಮುಗಿಯುತ್ತಿದ್ದಂತೇ ಇದೀಗ ಸಿಎಂ ಅವರ ಮತ್ತೋರ್ವ ಸಹೋದರ ಬಾಲಕೃಷ್ಣೇಗೌಡರ ಹಸ್ತಕ್ಷೇಪದ ಗುಸುಗುಸು ಶುರುವಾಗಿದೆ. ಜೆಡಿಎಸ್ ಸಚಿವರ ಆಪ್ತ ಸಹಾಯಕರ ನೇಮಕ ಇತ್ಯಾದಿ ಆಡಳಿತ ಸಂಬಂಧಿ ವಿಚಾರದಲ್ಲಿ ಬಾಲಕೃಷ್ಣೇಗೌಡ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಸಚಿವರುಗಳಿಗೆ ತಮಗೆ ಬೇಕಾದ ಪಿ.ಎ, ಪಿಎಸ್ ಗಳನ್ನು ನೇಮಕ ಮಾಡಿಕೊಳ್ಳುವ ಸ್ವಾತಂತ್ರ್ಯ ಇಲ್ಲವಾಗಿದೆ ಎನ್ನಲಾಗುತ್ತಿದೆ. ಯಾವ ಸಚಿವರಿಗೆ ಯಾರು ಆಪ್ತ ಸಹಾಯಕರಾಗಬೇಕು ಎಂಬುದನ್ನು ಬಾಲಕೃಷ್ಣೇಗೌಡರು ನಿರ್ಧರಿಸುತ್ತಾರೆ ಎಂಬ ಸಣ್ಣ ಅಸಮಾಧಾನದ ಧ್ವನಿ ಕೇಳಿಸುತ್ತಿದೆ.
ಇದಕ್ಕೆ ಉದಾಹರಣೆ ಎಂಬಂತೆ ವಿಜಯಪುರದ ಸಚಿವರಿಗೆ ಮಂಡ್ಯದ ಅಧಿಕಾರಿವೋರ್ವರನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದು, ಬಂಡೆಪ್ಪ ಕಾಶಪ್ಪನವರ್ ಅವರಗೆ ಇನ್ನೂ ಆಪ್ತ ಕಾರ್ಯದರ್ಶಿ ನೇಮಕವಾಗದೇ ಇರುವುದು, ಅಲ್ಲದೇ ಈ ಹುದ್ದೆಗಳಲ್ಲಿ ಹಾಸನ ಮತ್ತು ಮಂಡ್ಯ ಮೂಲದ ಅಧಿಕಾರಿಗಳೇ ಕಾಣುತ್ತಿರುವುದು ಈ ಅನುಮಾನ ಮೂಡಲು ಕಾರಣವಾಗಿದೆ.