ಸಂಸತ್ತಿನಲ್ಲಿ ಈಗ ಒಬ್ಬ ಮಾಜಿ ಪ್ರಧಾನ ಮಂತ್ರಿಯೂ ಇಲ್ಲ!| ದೇವೇಗೌಡ ಸೋಲು, ಮನಮೋಹನ ಸಿಂಗ್‌ ನಿವೃತ್ತಿ ಫಲ

ನವದೆಹಲಿ[ಜೂ.16]: 17ನೇ ಲೋಕಸಭೆಯ ಮೊದಲ ಅಧಿವೇಶನ ಜೂ.17ರಿಂದ ಆರಂಭವಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ, ಸಂಸತ್ತಿನ ಉಭಯ ಸದನಗಳಲ್ಲೂ ಒಬ್ಬರೇ ಒಬ್ಬರು ಮಾಜಿ ಪ್ರಧಾನಿಯೂ ಇಲ್ಲ.

Add Asianetnews Kannada as a Preferred SourcegooglePreferred

ಪ್ರತಿ ಬಾರಿ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಒಬ್ಬರಾದರೂ ಮಾಜಿ ಪ್ರಧಾನಿ ಇರುತ್ತಿದ್ದರು. ಆದರೆ ಈ ಸಲ ಒಬ್ಬರೂ ಇಲ್ಲ. 16ನೇ ಲೋಕಸಭೆಯ ಅವಧಿಯಲ್ಲಿ ಎಚ್‌.ಡಿ. ದೇವೇಗೌಡ ಲೋಕಸಭೆಯಲ್ಲಿದ್ದರೆ, ಮನಮೋಹನ ಸಿಂಗ್‌ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ದೇವೇಗೌಡ 13 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಏತನ್ಮಧ್ಯೆ, 1991ರಿಂದ ನಿರಂತರವಾಗಿ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಮನಮೋಹನ ಸಿಂಗ್‌ ಅವರು ಕಾಂಗ್ರೆಸ್ಸಿಗೆ ಸಂಖ್ಯಾಬಲ ಕೊರತೆ ಇರುವುದರಿಂದ ರಾಜ್ಯಸಭೆಗೆ ಪುನರಾಯ್ಕೆಯಾಗದಂತಾಗಿದೆ. ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಲು 43 ಶಾಸಕರ ಪ್ರಥಮ ಆದ್ಯತೆ ಮತಗಳು ಬೇಕು. ಆದರೆ ಕಾಂಗ್ರೆಸ್‌ ಅಸ್ಸಾಂನಲ್ಲಿ ಕೇವಲ 25 ಸದಸ್ಯರನ್ನು ಮಾತ್ರವೇ ಹೊಂದಿದೆ. ಕಾಂಗ್ರೆಸ್‌ ಆಳ್ವಿಕೆಯಿಂದ ಬೇರೆ ರಾಜ್ಯಗಳಿಂದ ಮನಮೋಹನ್‌ ಅವರನ್ನು ಆಯ್ಕೆ ಮಾಡಬಹುದಾದರೂ, ಯಾವುದೇ ಸ್ಥಾನಗಳು ಖಾಲಿ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ.