ಮಧ್ವರಾಜ್ ಪ್ರಚಾರ ವಾಹನದಲ್ಲಿ ಕಾಂಗ್ರೆಸ್ಸಿಗರ ಫೋಟೋಗಳೇ ಇಲ್ಲ!
ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಅವರು ಪಕ್ಷದ ಸಂಪ್ರದಾಯ ಮರೆತು ತಮ್ಮ ಚುನಾವಣಾ ಪ್ರಚಾರದ ವಾಹನ ಸಿದ್ಧಪಡಿಸಿದ್ದಾರೆ ಎಂಬ ಹೊಸ ಆರೋಪ ಕೇಳಿ ಬಂದಿದೆ.
ಉಡುಪಿ : ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇನ್ನೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಅವರು ಪಕ್ಷದ ಸಂಪ್ರದಾಯ ಮರೆತು ತಮ್ಮ ಚುನಾವಣಾ ಪ್ರಚಾರದ ವಾಹನ ಸಿದ್ಧಪಡಿಸಿದ್ದಾರೆ ಎಂಬ ಹೊಸ ಆರೋಪ ಕೇಳಿ ಬಂದಿದೆ.
ಪ್ರಮೋದ್ ಮಧ್ವರಾಜ್ ಅವರ ಚುನಾವಣಾ ಪ್ರಚಾರದ ವಾಹನ ಸಿದ್ಧವಾಗಿದ್ದು, ಅದರಲ್ಲಿ ಕಾಂಗ್ರೆಸ್ ಪರಂಪರೆಯಂತೆ ಕೇಂದ್ರ ನಾಯಕರು, ರಾಜ್ಯ ನಾಯಕರ ಭಾವಚಿತ್ರಗಳಿರಬೇಕಾಗಿತ್ತು. ಆದರೆ ಅದ್ಯಾವುದೂ ಇಲ್ಲ ಎಂಬುದು ಹೊಸ ವಿವಾದ ಹುಟ್ಟು ಹಾಕಿದೆ. ಮಾತ್ರವಲ್ಲ ಈ ವಾಹನದ ಮೇಲೆ ಪ್ರಮೋದ್ ಭಾವಚಿತ್ರ ಬಿಟ್ಟರೆ ಪಕ್ಷದ ಚಿಹ್ನೆ ಹಸ್ತದ ಚಿತ್ರ ಕೂಡ ಇಲ್ಲ. ಆದ್ದರಿಂದ ಪ್ರಮೋದ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವುದನ್ನು ಇದು ತೋರಿಸುತ್ತಿದೆ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ, ಪ್ರಮೋದ್ ಮಧ್ವರಾಜ್, ಇದು ತಾನು ಸಿದ್ಧಪಡಿಸಿದ ಪ್ರಚಾರ ವಾಹನವಲ್ಲ, ಅಭಿಮಾನಿಗಳು ಸಿದ್ಧಪಡಿಸಿದ ವಾಹನ. ಅದರಲ್ಲಿ ನನ್ನ ಮೇಲೆ ಅವರು ಅಭಿಮಾನ ವ್ಯಕ್ತಪಡಿಸಿದ್ದಾರೆಯೇ ಹೊರತು ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ನನ್ನ ಬೇರೆ ಎಲ್ಲಾ ಕಾರ್ಯಕ್ರಮಗಳಲ್ಲಿ ಪಕ್ಷದ ನಾಯಕರ ಫೋಟೋ, ಪಕ್ಷದ ಚಿಹ್ನೆ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಎರಡು ದಿನಗಳ ಹಿಂದೆ ಸಚಿವರು ಸಿಂಡಿಕೇಟ್ ಬ್ಯಾಂಕಿನಿಂದ ಅಕ್ರಮವಾಗಿ ಸಾಲ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅದನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು. ಈಗ ವಾಹನದ ಸುತ್ತವೂ ಪ್ರಮೋದ್ ಅವರು ಕೈಮುಗಿದು ನಿಂತಿರುವ ಹತ್ತಾರು ಫೋಟೋಗಳಿವೆ, ಆದರೆ ಕೇಂದ್ರ ನಾಯಕಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಆಸ್ಕರ್, ರಾಜ್ಯ ನಾಯಕರಾದ ಸಿದ್ದರಾಮಯ್ಯ ಅವರ ಬಾವಚಿತ್ರ ಇಲ್ಲ. ವಾಹನದಲ್ಲಿರುವ ಟಿವಿಯಲ್ಲಿ ಪ್ರಮೋದ್ ಅವರ ಸಾಧನೆಗಳನ್ನು ಬಿತ್ತರಿಸಲಾಗುತ್ತಿದೆ. ‘ಅಭಿವೃದ್ಧಿಯೊಂದಿಗೆ ನನ್ನ ಹೆಜ್ಜೆ, ಜೊತೆಗಿರಲಿ ನಿಮ್ಮ ಹಜ್ಜೆ’ ಎಂಬ ಘೋಷ ವಾಕ್ಯವೂ ಇದೆ.