ಡಿಕೆಶಿ ಪ್ರಕರಣ : ಜಾಮೀನು ಅರ್ಜಿ ವಜಾ
ಕಪ್ಪು ಹಣ ಸಕ್ರಮ ಪ್ರಕರಣ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಕನಕಪುರ ತಹಶೀಲ್ದಾರ್ ಕಚೇರಿ (ಚುನಾವಣಾ ವಿಭಾಗ) ಎಫ್ಡಿಸಿ ಎನ್.ನಂಜಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಬೆಂಗಳೂರು : ಕಪ್ಪು ಹಣ ಸಕ್ರಮ ಪ್ರಕರಣ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಕನಕಪುರ ತಹಶೀಲ್ದಾರ್ ಕಚೇರಿ (ಚುನಾವಣಾ ವಿಭಾಗ) ಎಫ್ಡಿಸಿ ಎನ್.ನಂಜಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಈ ಪ್ರಕರಣದ ತನಿಖಾ ಹಂತದಲ್ಲಿರುವುದರಿಂದ ಆರೋಪಿಗೆ ಜಾಮೀನು ಮಂಜೂರು ಮಾಡದಂತೆ ಸಿಬಿಐ ಆಕ್ಷೇಪಣೆಗೆ ಮಾನ್ಯ ಮಾಡಿದ ನ್ಯಾಯಾಲಯವು, ನಂಜಪ್ಪ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ.
2016 ನವೆಂಬರ್ 8ರಂದು .500 ಹಾಗೂ .1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ಸಂದರ್ಭದಲ್ಲಿ ರಾಮನಗರ ಕಾರ್ಪೋರೇಶನ್ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಬಿ.ಪ್ರಕಾಶ್ ಹಾಗೂ ಸಂಸದ ಡಿ.ಕೆ.ಸುರೇಶ್ ಆಪ್ತ ಸಹಾಯಕ ಪದ್ಮನಾಭಯ್ಯ ಸೇರಿದಂತೆ ಸಚಿವ ಡಿ.ಕೆ.ಶಿವಕುಮಾರ್ ಜತೆಗೂಡಿ ನಂಜಪ್ಪ ಅವರು, .10.48 ಲಕ್ಷ ಅಕ್ರಮವಾಗಿ ಸಕ್ರಮವಾಗಿ ಪರಿವರ್ತಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ 2017ರ ಏಪ್ರಿಲ್ 7ರಂದು ಸಿಬಿಐ ಪ್ರಕರಣ ದಾಖಲಿಸಿದ್ದು, ಇದರಲ್ಲಿ ನಂಜಪ್ಪ 4ನೇ ಆರೋಪಿಯಾಗಿದ್ದಾರೆ.
ಆರೋಪಿ ನಂಜಪ್ಪ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣಾ ಅಧಿಕಾರಿಯ ಸ್ಟಾಂಪ್ ಹಾಗೂ ಸಹಿ ಅಕ್ರಮವಾಗಿ ಬಳಕೆ ಮಾಡಿಕೊಂಡು 120 ನಕಲಿ ವೋಟರ್ ಐಡಿ ಸೃಷ್ಟಿಸಿದ್ದಾರೆ. ಇದೇ ನಕಲಿ ವೋಟರ್ ಐಡಿಗಳು ಕಪ್ಪು ಹಣ ಪರಿವರ್ತಿಸಲು ಬಳಕೆಯಾಗಿದೆ ಎಂಬ ಗಂಭೀರ ಆರೋಪವಿದೆ.