ಖಾಸಗಿ ಬಸ್ಗಳ ದುಪ್ಪಟ್ಟು ದರಕ್ಕಿಲ್ಲ ಕಡಿವಾಣ
ಖಾಸಗಿ ಬಸ್ಗಳು ಪ್ರಯಾಣ ದರ ದುಪಟ್ಟುಗೊಳಿಸುವುದನ್ನು ನಿಯಂತ್ರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ಪೀಠ ಈ ಆದೇಶ ನೀಡಿದೆ.
ಬೆಂಗಳೂರು : ಸಾಲು ಸಾಲು ಸರ್ಕಾರಿ ರಜೆಗಳು ಹಾಗೂ ಹಬ್ಬದ ದಿನಗಳಲ್ಲಿ ಖಾಸಗಿ ಬಸ್ಗಳು ಪ್ರಯಾಣ ದರ ದುಪಟ್ಟುಗೊಳಿಸುವುದನ್ನು ನಿಯಂತ್ರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತಾ ಅವರಿದ್ದ ಪೀಠ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರು ಸಂಬಂಧಪಟ್ಟಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಿಲ್ಲ. ಸರ್ಕಾರದ ಎಲ್ಲ ಆಡಳಿತವನ್ನು ನ್ಯಾಯಾಲಯಗಳು ನಡೆಸಲಾಗುವುದಿಲ್ಲ. ಆದ್ದರಿಂದ ಅರ್ಜಿದಾರರು ಮೊದಲು ಸಂಬಂಧಪಟ್ಟಸರ್ಕಾರಿ ಇಲಾಖೆಗೆ ಮನವಿ ಪತ್ರ ಸಲ್ಲಿಸಲಿ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.
ಮುಖ್ಯ ನ್ಯಾಯಮೂರ್ತಿಗಳು, ದರ ಹೆಚ್ಚಳ ಮಾಡಿದಾಗ ಖಾಸಗಿ ಬಸ್ಗಳಲ್ಲಿ ನೀವು ಪ್ರಯಾಣಿಸಬೇಡಿ. ಸರ್ಕಾರಿ ಬಸ್ಗಳು ಹಾಗೂ ರೈಲುಗಳ ಸೇವೆ ಪಡೆಯಿರಿ. ನಮ್ಮ ಬಸ್ಗಳಲ್ಲಿ ಪ್ರಯಾಣಿಸುವಂತೆ ಖಾಸಗಿ ಬಸ್ಗಳು ಪ್ರಯಾಣಿಕರನ್ನು ಒತ್ತಾಯ ಮಾಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿ ಅರ್ಜಿ ವಜಾಗೊಳಿಸಿದರು.