ಸ್ಫೋಟಕ್ಕೆ ಸಂಬಂಧಿಸಿದಂತೆ ಈವರೆಗೆ 5 ಮಂದಿಯನ್ನು ಬಂಧಿಸಲಾಗಿದೆ. ಕಳೆದ ವರ್ಷ ಆ.1ರಂದು ಮೈಸೂರಿನ ಚಾಮರಾಜಪುರಮ್’ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್ ಸ್ಫೋಟ ನಡೆದಿತ್ತು.

ಬೆಂಗಳೂರು (ಮೇ.24): ಕಳೆದ ವರ್ಷ ಆಗಸ್ಟ್​ 1ರಂದು ಮೈಸೂರಿನ ಕೋರ್ಟ್​ ಆವರಣದಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಏ)ಯು ಮೂವರರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

Add Asianetnews Kannada as a Preferred SourcegooglePreferred

ತನಿಖೆ ನಡೆಸುತ್ತಿರುವ ಎನ್’ಐಏ ಹೈದರಾಬಾದ್ ಶಾಖೆಯು ಪ್ರಕರಣಕ್ಕೆ ಸಂಬಂಧಿಸಿ ಬೇಸ್ ಸಂಘಟನೆಯ ನೈನಾರ್ ಅಬ್ಬಾಸ್ ಅಲಿ (28), ಎಂ. ಸ್ಯಾಮ್ಸನ್ ಕರೀಮ್ ರಾಜಾ (23) ಹಾಗೂ ಎಸ್. ದಾವೂದ್ ಸುಲೈಮಾನ್ (23) ಎಂಬವರ ವಿರುದ್ಧ ವಿಶೇಷ ಎನ್’ಐಏ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.

ಸ್ಫೋಟಕ್ಕೆ ಸಂಬಂಧಿಸಿದಂತೆ ಈವರೆಗೆ 5 ಮಂದಿಯನ್ನು ಬಂಧಿಸಲಾಗಿದೆ. ಕಳೆದ ವರ್ಷ ಆ.1ರಂದು ಮೈಸೂರಿನ ಚಾಮರಾಜಪುರಮ್’ನಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್ ಸ್ಫೋಟ ನಡೆದಿತ್ತು.

ಬಂಧಿತರು ಮೈಸೂರು, ಆಂಧ್ರಪ್ರದೇಶದ ಚಿತ್ತೂರು ಮತ್ತು ನೆಲ್ಲೂರು, ಹಾಗೂ ಕೇರಳದ ಕೊಲ್ಲಮ್ ಹಾಗೂ ಮಲ್ಲಪುರಮ್ ನ್ಯಾಯಾಲಯಗಳ ಆವರಣಗಳಲ್ಲಿ ಕೂಡಾ ಬಾಂಬ್ ಸ್ಫೋಟ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಕಳೆದ ವರ್ಷ ಏ.7ರಂದು ಚಿತ್ತೂರಿನ ನ್ಯಾಯಲಯದಲ್ಲಿ, ಜೂ.15 ರಂದು ಕೇರಳದ ಕೊಲ್ಲಮ್ ನ್ಯಾಯಾಲಯದಲ್ಲಿ, ಆ.1 ರಂದು ಮೈಸೂರು ನ್ಯಾಯಾಲಯದಲ್ಲಿ, ಸೆ.12ರಂದು ಆಂಧ್ರದ ನೆಲ್ಲೂರು ನ್ಯಾಯಾಲಯದಲ್ಲಿ, ಹಾಗೂ ನ.2 ರಂದು ಕೇರಳದ ಮಲ್ಲಪುರಮ್ ನ್ಯಾಯಾಲಯದಲ್ಲಿ ಲಘು ತೀವ್ರತೆ ಬಾಂಬ್ ಸ್ಫೋಟಗಳು ನಡೆದಿವೆ.