ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧುಗೆ ಇದೀಗ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಪಾಕ್ ನಿಂದ ತಂದ ಉಡುಗೊರೆಯೊಂದು ಸಮಸ್ಯೆ ತಂದೊಡ್ಡಿದೆ.
ನವದೆಹಲಿ : ಕಾಂಗ್ರೆಸ್ ಮುಖಂಡ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧುಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ನವಜೋತ್ ಸಿಂಗ್ ಸಿಧು ತುಂಬಿದ ನಿರ್ಜೀವ ಬ್ಲಾಕ್ ಪ್ಯಾಟ್ರಿಡ್ಜ್ ಹಕ್ಕಿಯನ್ನು ಉಡುಗೊರೆಯಾಗಿ ತಂದಿದ್ದು, ಈ ನಿಟ್ಟಿನಲ್ಲಿ ಸಿಧು ವಿರುದ್ಧ ವೈಲ್ಡ್ ಲೈಫ್ ಕಂಟ್ರೋಲ್ ಬ್ಯೂರೋನಲ್ಲಿ ದೂರು ದಾಖಲಾಗಿದೆ.
ಸ್ವಯಂಪ್ರೇರಿತವಾಗಿ ವ್ಯಕ್ತಿಯೋರ್ವರು ದೂರು ದಾಖಲಿಸಿದ್ದು, ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಪಾಕಿಸ್ಥಾನದಿಂದ ತಂದು ಪಂಜಾಬ್ ನಲ್ಲಿ ಪಕ್ಷಿಯ ದೇಹದ ಭಾಗಗಳನ್ನು ಇರಿಸಿಕೊಳ್ಳಲಾಗಿದೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂದೀಪ್ ಜೈನ್ ಎನ್ನುವ ವ್ಯಕ್ತಿ ದೂರು ದಾಖಲು ಮಾಡಿದ್ದು, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ. ಯಾವುದೇ ಪ್ರಾಣಿ ಅಥವಾ ಪಕ್ಷಿಯ ದೇಹದ ಭಾಗಗಳನ್ನು ಇರಿಸಿಕೊಳ್ಳುವುದು ಕಾನೂನು ಬಾಹಿರ ಎಂದು ತಿಳಿಸಿದ್ದಾರೆ.
ಪಾಕಿಸ್ಥಾನದಿಂದ ತಂದ ನಿರ್ಜೀವ ಬ್ಲಾಕ್ ಪ್ಯಾಟ್ರಿಡ್ಜ್ ಹಕ್ಕಿಯನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದೊಂದು ಕಾನೂನು ಬಾಹಿರ ಚಟುವಟಿಕೆ. ಅವರ ವಿರುದ್ಧ ಸೂಕ್ತ ತನಿಖೆ ನಡೆಸುವ ಮೂಲಕ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಅನೇಕ ವಿವಾದಗಳ ಮೂಲಕ ಸುದ್ದಿಯಾಗುತ್ತಲೇ ಇರುವ ಸಿಧು, ಇತ್ತೀಚೆಗಷ್ಟೇ ಚುನಾವಣಾ ರ್ಯಾಲಿಯೊಂದರಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.
