ನಾರದ ಸ್ಟಿಂಗ್ ಪ್ರಕರಣ: 13 ಮಂದಿ ಟಿಎಂಸಿ ಸಂಸದರ ವಿರುದ್ಧ ಎಫ್ಐಆರ್
ನಾರದ ಕುಟುಕು ಕಾರ್ಯಾಚರಣೆ ಪ್ರಕರಣದ ಆರೋಪಿಗಳಾದ ತೃಣಮೂಲ ಕಾಂಗ್ರೆಸ್ ನಾಯಕರಾದ ಮುಕುಲ್ ರಾಯ್, ಸುಗತಾ ರಾಯ್ ಹಾಗೂ ಮದನ್ ಮಿತ್ರಾ ಸೇರಿದಂತೆ 13 ಮಂದಿಯ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಕೋಲ್ಕತ್ತಾ (ಏ.17): ನಾರದ ಕುಟುಕು ಕಾರ್ಯಾಚರಣೆ ಪ್ರಕರಣದ ಆರೋಪಿಗಳಾದ ತೃಣಮೂಲ ಕಾಂಗ್ರೆಸ್ ನಾಯಕರಾದ ಮುಕುಲ್ ರಾಯ್, ಸುಗತಾ ರಾಯ್ ಹಾಗೂ ಮದನ್ ಮಿತ್ರಾ ಸೇರಿದಂತೆ 13 ಮಂದಿಯ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ನಾರದ ಸ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಒಂದು ತಿಂಗಳ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಪಿತೂರಿ ಅಡಿಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರ ಮೇಲೆ ಸಿಬಿಐ ಎಫ್ ಐಆರ್ ದಾಖಲಿಸಿದೆ.
ತೃಣಮೂಲ ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರ ಬಳಸಿ ಹಣವನ್ನು ಸ್ವೀಕರಿಸಿರುವುದಕ್ಕೆ ಮೇಲ್ನೋಟಕ್ಕೆ ಸಾಕ್ಷಾಧಾರಗಳು ಲಭ್ಯವಾಗಿವೆ ಎಂದು ಸಿಬಿಐ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ 2016 ರ ವಿಧಾನಸಭಾ ಚುನಾವಣೆಗೂ ಮುನ್ನ ಟಿಎಂಸಿ ಮುಖಂಡರು ನೆರವು ನೀಡುತ್ತೇನೆಂದು ಹೇಳಿ ಹಣ ಸ್ವೀಕರಿಸಿರುವ ಬಗ್ಗೆ ಕುಟುಕು ಕಾರ್ಯಾಚರಣೆ (ಸ್ಟಿಂಗ್ ಆಪರೇಶನ್) ನಡೆಸಿದ ಬೇರೆ ಬೇರೆ ನ್ಯೂಸ್ ಏಜನ್ಸಿಗಳು ನಾರದ ಸ್ಟಿಂಗ್ ಟೇಪ್ ಗಳನ್ನು ಬಿಡುಗಡೆ ಮಾಡಿದ್ದವು.