ಮೆಟ್ರೋ ಪುನಾರಂಭ; ಸರಕಾರದ ಎಸ್ಮಾ ಬೆದರಿಕೆ; ಮೆಟ್ರೋ ಸಿಬ್ಬಂದಿ ಮುಷ್ಕರ ವಾಪಸ್
ಇಂದು ಬೆಳಗ್ಗೆಯಿಂದಲೂ ನಗರದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ರೈಲು ಸಂಚಾರ ನಿಲ್ಲಿಸಿದ ಬಿಎಂಆರ್'ಸಿಎಲ್ ಸಿಬ್ಬಂದಿ ವಿರುದ್ಧ ಗರಂ ಆದ ರಾಜ್ಯ ಸರಕಾರ ಎಸ್ಮಾ ಕಾಯ್ದೆ ಜಾರಿಗೆ ತರಲು ಚಿಂತನೆಯನ್ನೂ ನಡೆಸಿತ್ತು.
ಬೆಂಗಳೂರು(ಜುಲೈ 07): ಇಂದು ಸ್ಥಗಿತಗೊಂಡಿದ್ದ ನಗರದ ಮೆಟ್ರೋ ರೈಲು ಮತ್ತೆ ಸಂಚಾರ ಆರಂಭಿಸಲಿದೆ. ಮೆಟ್ರೋ ಸಿಬ್ಬಂದಿ ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆಯಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಮತ್ತೆ ಆರಂಭವಾಗಿದೆ. ನಿನ್ನೆ ಪೊಲೀಸ್ ಮತ್ತು ಮೆಟ್ರೋ ಸಿಬ್ಬಂದಿ ಮಾರಾಮಾರಿ ನಡೆದ ಹಿನ್ನೆಲೆಯಲ್ಲಿ ಇಂದು ಮೆಟ್ರೋ ಸಿಬ್ಬಂದಿ ಮುಷ್ಕರ ನಡೆಸಲು ನಿರ್ಧರಿಸಿದ್ದರು.
ಇಂದು ಬೆಳಗ್ಗೆಯಿಂದಲೂ ನಗರದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ರೈಲು ಸಂಚಾರ ನಿಲ್ಲಿಸಿದ ಬಿಎಂಆರ್'ಸಿಎಲ್ ಸಿಬ್ಬಂದಿ ವಿರುದ್ಧ ಗರಂ ಆದ ರಾಜ್ಯ ಸರಕಾರ ಎಸ್ಮಾ ಕಾಯ್ದೆ ಜಾರಿಗೆ ತರಲು ಚಿಂತನೆಯನ್ನೂ ನಡೆಸಿತ್ತು. ಈ ಸಂಬಂಧ ಬಿಎಂಆರ್'ಸಿಎಲ್ ಸಿಬ್ಬಂದಿ ಜೊತೆ ಸರಕಾರ ಸಂಧಾನ ಸಭೆಯನ್ನೂ ನಡೆಸಿತು. ಸಂಧಾನಕ್ಕೆ ಮೆಟ್ರೋ ಸಿಬ್ಬಂದಿ ಬಗ್ಗದಿದ್ದರೆ ಎಸ್ಮಾ ಕಾಯ್ದೆ ಜಾರಿಗೊಳಿಸಲು ಸರಕಾರ ನಿರ್ಧರಿಸಿತ್ತು. ಆದರೆ, ಬಿಎಂಆರ್'ಸಿಎಲ್ ತಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಇದರೊಂದಿಗೆ ಕೆಲವಾರು ಗಂಟೆ ಕಾಲ ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಮತ್ತೆ ಆರಂಭವಾಗಿ ಬೆಂಗಳೂರಿಗರು ನಿಟ್ಟುಸಿರು ಬಿಡುವಂತಾಗಿದೆ.
ಮೆಟ್ರೋ ಗಲಾಟೆ ಯಾಕೆ?
ನಿನ್ನೆ ಸೆಂಟ್ರಲ್ ಕಾಲೇಜು ಮೆಟ್ರೋ ಸ್ಟೇಷನ್'ನಲ್ಲಿ ಸಿಬ್ಬಂದಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರು. ಆ ಬಳಿಕ ಬಿಎಂಆರ್'ಸಿಎಲ್ ಸಿಬ್ಬಂದಿ ಕೂಡ ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ್ದರು. ನಿಂತಿದ್ದ ಎಲಿವೇಟರ್'ನಲ್ಲಿ ಮೆಟ್ಟಲು ಹತ್ತಿಕೊಂಡು ಹೋಗುತ್ತಿದ್ದ ಪೊಲೀಸರನ್ನು ಮೆಟ್ರೋ ಸಿಬ್ಬಂದಿ ತಡೆದದ್ದು ಈ ಘಟನೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಪೊಲೀಸರು ಹಾಗೂ ಆರು ಮೆಟ್ರೋ ಸಿಬ್ಬಂದಿಯನ್ನು ಬಂಧಿಸಲಾಗಿದೆ.