ಮಗಳ ಮದುವೆಗೆಂದು ಕೂಡಿಟ್ಟಿದ್ದ 50 ಲಕ್ಷ ರು. ಸಂತ್ರಸ್ತರಿಗೆ ಕೊಟ್ಟ ಮಹಾತಾಯಿ
ಮಹಾತಾಯಿಯೊಬ್ಬರು ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ 50 ಲಕ್ಷ ರೂಪಾಯಿ ಹಣವನ್ನು ಪ್ರವಾಹಕ್ಕೆ ತುತ್ತಾಗಿ ಪರದಾಡುತ್ತಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡಿ ಮಗಳ ಮದುವೆಯನ್ನು ರಿಜಿಸ್ಟರ್ ಮದುವೆ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು, [ಆ.12]: ಒಂದು ಕೈಯಿಂದ ಕೊಟ್ಟಿದ್ದು ಇನ್ನೊಂದು ಕೈಗೆ ಗೊತ್ತಾಗದ ರೀತಿಯಲ್ಲಿ ಸಹಾಯ ಮಾಡುತ್ತಿದ್ದ ಕಾಲ ಎಲ್ಲಿದೆ ಅಂತಾರೆ. ಅದು ಇಲ್ಲಿದೆ.
ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಪರದಾಡುತ್ತಿರುವ ಉತ್ತರ ಕರ್ನಾಟಕದ ಜನತೆಗೆ ಮುಂಬೈ ಮೂಲದ ಸುಮನ್ ರಾವ್ ಎನ್ನುವ ಮಹಾತಾಯಿ ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ 50 ಲಕ್ಷ ರು.ಸಹಾಯವಾಗಿ ನೀಡಿದ್ದಾರೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ಡಿಸೆಂಬರ್ ತಿಂಗಳಲ್ಲಿ ಮಗಳ ಮದುವೆ ಮಾಡಬೇಕೆಂದು ಕೂಡಿಟ್ಟದ್ದ 50 ಲಕ್ಷ ಹಣವನ್ನು ಯಾರಿಗೂ ಹೇಳದೇ, ಎಲ್ಲೂ ಪ್ರಚಾರ ಮಾಡದೇ ನೇರವಾಗಿ ಕರ್ನಾಟಕ ಸಿಎಂ ಬ್ಯಾಂಕ್ ಖಾತೆಗೆ ಹಾಕಿದ್ದಾರೆ.
ಈ ಮಾಹಿತಿ ಸುವರ್ಣ ನ್ಯೂಸ್ ಗೆ ಸಿಕ್ಕಿದ್ದು, ಕೂಡಲೇ ಸುಮನ್ ರಾವ್ ಅವರನ್ನು ಸಂಪರ್ಕಿಸಿ ಇದರ ಬಗ್ಗೆ ಕೇಳಿದಾಗ ಈ ಮಹಾತಾಯಿ ಬಾಯಿಂದ ಬಂದಿದ್ದು ಮೊದಲನೇ ಪದ ನಮಗೆ ಪ್ರಚಾರ ಬೇಡ ಸರ್, ನಮ್ಮ ಸೇವೆ ಹೀಗೆ ಇರುತ್ತೆ ಅಂತ. ಎಂಥಾ ಗುಣ, ಏನು ಸ್ವಭಾವ. ನಿಜಕ್ಕೂ ಈಕೆ ಎಲ್ಲರಿಗೂ ಮಾದರಿ.
ಯಾಕಂದ್ರೆ ಯಾರಿಗಾದರೂ 10 ರು. ಕೊಟ್ರೇ ಮೂರ್ನಾಲ್ಕು ಬಾರಿ ಹೇಳಿಕೊಳ್ಳುವ ಈ ಕಾಲದಲ್ಲಿ, ಸುಮನ್ ರಾವ್ ಅವರು 50 ಲಕ್ಷ ರು. ಸಹಾಯ ಮಾಡಿರುವುದನ್ನು ಎಲ್ಲೂ ತುಟಿ ಬಿಚ್ಚಿ ಹೇಳಿಲ್ಲ.
ತತ್ತರಿಸಿದ ಉತ್ತರಕರ್ನಾಟಕಕ್ಕೆ ಸುಧಾಮೂರ್ತಿ 10 ಕೋಟಿ ರು ನೆರವು
ಸುಮನ್ ರಾವ್ ಪುತ್ರಿ ಅಕ್ಷತಾ ರಾವ್, ಪ್ರಸ್ತುತ ವಿದೇಶದಲ್ಲಿ ತಂಗಿದ್ದು, ಡಿಸೆಂಬರ್ ನಲ್ಲಿ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಈಗ ಈ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿದ್ದಾರೆ. ಇನ್ನು ಸುವರ್ಣ ನ್ಯೂಸ್ ಸುಮನ್ ರಾವ್ ಜತೆ ಮಾತನಾಡುತ್ತಾ, ಹಣವೆಲ್ಲ ಕೊಟ್ಟಾಯ್ತು. ನಿಮ್ಮ ಮಗಳ ಮದುವೆಗೆ ಏನು ಮಾಡುತ್ತೀರಾ..? ಎಂದು ಪ್ರಶ್ನೆ ಕೇಳಿತು. ಕೂಡಲೇ ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸುಮನ್ ರಾವ್, ಮಗಳ ಮದುವೆಯನ್ನು ರಿಜಿಸ್ಟರ್ ಮದುವೆ ಮಾಡಿದರಾಯ್ತು ಎಂದು ನಿರರ್ಗಳವಾಗಿ ಹೇಳಿಬಿಟ್ರು.
ಮುಂಬೈ ಮೂಲದ ಸುಮನ್ ರಾವ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ NGO ನಡೆಸುತ್ತಿದ್ದಾರೆ.