ಕನ್ನಡ ಚಿತ್ರಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಮಲ್ಟಿಫ್ಲೆಕ್ಸ್'ಗಳು!
ಸರ್ಕಾರದ ಆದೇಶ ಸಮಾನತೆ ಹಕ್ಕಿನ ಉಲ್ಲಂಘನೆಯಾಗಿದೆ. ಸಿನಿಮಾ ಪರವಾನಗಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಸರ್ಕಾರ ಆದೇಶ ಹೊರಡಿಸುವ ಮೂಲಕ ನಿರ್ಬಂಧಿಸುವಂತಿಲ್ಲ'
ಬೆಂಗಳೂರು(ಮೇ.11): ಕನ್ನಡ ಚಿತ್ರಗಳ ವಿರುದ್ಧ ಮಲ್ಟಿಫ್ಲೆಕ್ಸ್'ಗಳು ಸೇಡು ತೀರಿಸಿಕೊಳ್ಳಲು ಹೊರಟಿವೆ. 200 ರೂ. ದರ ನಿಗದಿ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅಸೋಸಿಯೇಷನ್ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರದ ದರ ನಿಗದಿ ಆದೇಶವನ್ನು ರದ್ದುಪಡಿಸಲು ಮನವಿ ಮಾಡಿವೆ.
ಸರ್ಕಾರವು ಮಲ್ಟಿಫ್ಲೆಕ್ಸ್'ಗಳ ವಿರುದ್ಧ ತಾರತಮ್ಯ ಧೋರಣೆ ತಾಳುತ್ತಿದ್ದು, ಯೂಟ್ಯೂಬ್,ನೆಟ್'ಫ್ಲೆಕ್ಸ್, ಡಿಟಿ'ಹೆಚ್'ಗೆ ನಿರ್ಬಂಧ ವಿಧಿಸಿಲ್ಲ. ಸರ್ಕಾರದ ಆದೇಶ ಸಮಾನತೆ ಹಕ್ಕಿನ ಉಲ್ಲಂಘನೆಯಾಗಿದೆ. ಸಿನಿಮಾ ಪರವಾನಗಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಸರ್ಕಾರ ಆದೇಶ ಹೊರಡಿಸುವ ಮೂಲಕ ನಿರ್ಬಂಧಿಸುವಂತಿಲ್ಲ' ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ರಿಟ್ ಅರ್ಜಿ ಸಲ್ಲಿಸಿವೆ.
ಈ ನಡುವೆ ನಾಳೆ ಬಿಡುಗಡೆಯಾಗುತ್ತಿರುವ ದುನಿಯಾ ವಿಜಯ್ ಅಭಿನಯದ 'ಮಾಸ್ತಿಗುಡಿ' ಚಿತ್ರಕ್ಕೆ ಮಲ್ಟಿಫ್ಲೆಕ್ಸ್'ಗಳಲ್ಲಿ ಹೆಚ್ಚಿನ ಸ್ಕ್ರೀನ್'ಗೆ ಅವಕಾಶ ನೀಡುತ್ತಿಲ್ಲ. ಈ ಹಿನ್ನಲೆಯಲ್ಲಿ ನಟ ದುನಿಯಾ ವಿಜಿ, ನಿರ್ದೇಶಕ ನಾಗಶೇಖರ್ ಹಾಗೂ ನಿರ್ಮಾಪಕ ಪಿ. ಸುಂದರ್ ಅವರನ್ನೊಳಗೊಂಡ ಸಿನಿಮಾ ತಂಡವು ಫಿಲ್ಮ್ ಚೇಂಬರ್'ಗೆ ದೂರು ನೀಡಿದೆ.ಸಮಸ್ಯೆ ಬಗೆಹರಿಸುವುದಾಗಿ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಚಿತ್ರತಂಡಕ್ಕೆ ಭರವಸೆ ನೀಡಿದ್ದಾರೆ.
ಒಂದು ವೇಳೆ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್ ನೀಡದೆ ತಾರತಮ್ಯ ನೀತಿ ಅನುಸರಿಸಿದರೆ ಮಲ್ಟಿಪ್ಲೆಕ್ಸ್'ಗಳ ಮುಂದೆ ಧರಣಿ ನಡೆಸುವುದಾಗಿ ನಟ ದುನಿಯಾ ವಿಜಿ ತಿಳಿಸಿದ್ದಾರೆ.