ನಾನೇಕೆ ಶಬರಿಮಲೆ ಸುಪ್ರೀಂ ತೀರ್ಪು ವಿರೋಧಿಸುತ್ತೇನೆ?: ರಾಜೀವ್ ಚಂದ್ರಶೇಖರ್
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಖಂಡಿತ ನಿಜ. ಕಾರಣ ಇದು ಕೇವಲ ಮಹಿಳಾ ಸಮಾನತೆಯನ್ನು ಪ್ರತಿಪಾದಿಸಿದ್ದಷ್ಟೇ ಅಲ್ಲ, ಧರ್ಮ ಮತ್ತು ಕಾನೂನಿನ ನಡುವಿನ ಆರೋಗ್ಯಕರ ಚರ್ಚೆಗೂ ವೇದಿಕೆ ಒದಗಿಸಿದೆ.
ಬೆಂಗಳೂರು(ಅ.19): ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೆ ಪ್ರವೇಶ ನೀಡಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಖಂಡಿತ ನಿಜ. ಕಾರಣ ಇದು ಕೇವಲ ಮಹಿಳಾ ಸಮಾನತೆಯನ್ನು ಪ್ರತಿಪಾದಿಸಿದ್ದಷ್ಟೇ ಅಲ್ಲ, ಧರ್ಮ ಮತ್ತು ಕಾನೂನಿನ ನಡುವಿನ ಆರೋಗ್ಯಕರ ಚರ್ಚೆಗೂ ವೇದಿಕೆ ಒದಗಿಸಿದೆ.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಆ ನಂತರ ಶಬರಿಮಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಒಂದು ಸಮನ್ವಯ ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದೆ. ಈ ಹಿನ್ನೆಲೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಪ್ರಸ್ತುತ ಸ್ಥಿತಿಗತಿಯ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಓವರ್ ಟು ರಾಜೀವ್ ಚಂದ್ರಶೇಖರ್:
"2018 ರಲ್ಲಿ ನಾನು ಮತ್ತೆ ಶಬರಿಮಲೆ ಬೆಟ್ಟ ಹತ್ತಲಿದ್ದೇನೆ. ಈ ಮೂಲಕ ಸ್ವಾಮಿ ಅಯ್ಯಪ್ಪನನ್ನು 25ನೇ ಬಾರಿ ಎದುರುಗೊಳ್ಳಲಿದ್ದೇನೆ. ಅಯ್ಯಪ್ಪನ ಸನ್ನಿಧಿಗೆ ನಾನು ಚಿಕ್ಕ ವಯಸ್ಸಿನಿಂದಲೂ ಬರುತ್ತಿದ್ದೇನೆ. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದ ಮೇಲೆ ಅಯ್ಯಪ್ಪನ ದರ್ಶನಕ್ಕೆ ತಡೆ ಬಿತ್ತಿದ್ದಾದರೂ, ಅಲ್ಲಿಂದ ಮರಳಿ ಬಂದ ಮೇಲೆ ಅಯ್ಯಪ್ಪನ ಆರ್ಶೀವಾದದಿಂಧ ಮತ್ತೆ ಈ ಪ್ರತೀತಿ ಮುಂದುವರೆದಿದೆ.
ಈ ಮೂಲಕ 18ಕ್ಕಿಂತ ಹೆಚ್ಚು ಬಾರಿ ಶಬರಿಮಾಲೆ ಧರಿಸಿದ ನಾನು ಗುರುಸ್ವಾಮಿಯಾಗಿದ್ದೇನೆ. ಆದರೆ ಈ ಬಾರಿ ನನಗೆ ಎರಡು ಬಾರಿ ಶಬರಿಮಲೆಗೆ ಹೋಗಲಾಗಿಲ್ಲ. ಕೇರಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಮೊದಲನೆಯದಾದರೆ, ಸುಪ್ರೀಂ ಕೋರ್ಟ್ ತೀರ್ಪು ಮತ್ತು ಆ ನಂತರದ ಬೆಳವಣಿಗೆಗಳು ನನ್ನ ಯಾತ್ರೆಗೆ ತಡೆಯೊಡ್ಡಿವೆ.
ಮೊದಲಿಗೆ ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಮಹಿಳಾ ಸಮಾನತೆಗೆ ವಿರುದ್ಧವಾದುದು ಎಂಬ ಅಭಿಪ್ರಾಯವೇ ತಪ್ಪು. ಇದು ಮಹಿಳಾ ಸಮಾನತೆಯ ಪ್ರಶ್ನೆ ಅಲ್ಲವೇ ಅಲ್ಲ, ಇದು ಧರ್ಮ ನಂಬಿಕೆ ಮತ್ತು ಆಚರಣೆಯ ಪ್ರಶ್ನೆ. ಸ್ವಾಮಿ ಅಯ್ಯಪ್ಪನ ಮೇಲಿರುವ ಕೋಟ್ಯಾಂತರ ಭಕ್ತರ ಗೌರವದ ಪ್ರಶ್ನೆ. ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದೇವರೂ ಕೂಡ ವಿವಿಧ ರೀತಿಯ ಆಚರಣೆಗಳ ಕಟ್ಟುಪಾಡಿಗೆ ಒಳಪಟ್ಟಿದ್ದಾನೆ. ಒಂದು ದೇವರಿಗೆ ಒಂದು ರೀತಿಯ ಪೂಜಾ ವಿಧಾನಗಳಿವೆ.
ಅದರಂತೆ ಸ್ವಾಮಿ ಅಯ್ಯಪ್ಪನಿಗೂ ವಿಶೇಷವಾದ ಪೂಜಾ ವಿಧಾನ ಇದ್ದು, ಇದನ್ನು ಪಾಲಿಸುವುದರಿಂದ ಮಹಿಳೆಯ ಸಮಾನತೆ ಮೇಲೆ ದಾಳಿ ಹೇಗಾದಿತು?. ಆದ್ದರಿಂದ ಇದನ್ನು ಲಿಂಗ ಅಸಮಾನತೆ ದೃಷ್ಟಿಯಿಂಧ ನೊಡದೇ ನಂಬಿಕೆ ಆಧಾರದ ಮೇಲೆ ಪರಿಗಣಿಸಬೇಕಿದೆ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಇರುವಂತೆ ಹಿಂದೂ ಧರ್ಮದಲ್ಲೂ ಅನೇಕ ನಂಬಿಕೆ ಆಧಾರಿತ ಸಂಗತಿಗಳಿವೆ ಎಂಬುದನ್ನು ನಾವು ಮರೆಯಬಾರದು.
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಆ ನಂನತರ ಕೇರಳ ಪ್ರಕ್ಷುಬ್ಧವಾಗಿರುವುದು ನಿಜಕ್ಕೂ ಖೇದಕರ ಸಂಗತಿ. ಆದರೆ ಹಿಂದೂ ಸಮುದಾಯವನ್ನು ಒಡೆದು ಆ ಮೂಲಕ ತಮ್ಮ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಬಯಸಿರುವ ರಾಜ್ಯ ಸರ್ಕಾರದ ಹುನ್ನಾರವನ್ನೂ ನಾವು ಕಡೆಗಣಿಸಬಾರದು. ನಮ್ಮ ನಂಬಿಕೆ ಮೇಲೆ ದಾಳಿ ನಡೆಯುತ್ತಿದೆ ಎಂಬ ಆತಂಕದಿಮದಲೇ ಕೇರಳದ ಹಿಂದೂಗಳು ಸಹನೆ ಕಳೆದುಕೊಂಡಿದ್ದಾರೆ ವಿನಃ ಮಹಿಳೆಯರ ಮೇಲಿನ ದ್ವೇಷದಿಂದಲ್ಲ ಎಂಬುದಂತೂ ಸ್ಪಷ್ಟ.
ಇದಕ್ಕೆಲ್ಲಾ ಪರಿಹಾರವಾಗಿ ನನ್ನ ಅಭಿಪ್ರಾಯ ಕೇಳುವುದಾದರೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲಿದೆ ಎಂಬ ಭರವಸೆ ನನಗಿದೆ. ಈ ಮೂಲಕ ನಮ್ಮ ಸಂಪ್ರದಾಯ, ನಮ್ಮ ನಂಬಿಕೆಯನ್ನು ಮರುಸ್ಥಾಪಿಸುವಲ್ಲಿ ನಮ್ಮ ವ್ಯವಸ್ಥೆ ದೃಢವಾಗಿ ನಿಲ್ಲಲಿದೆ ಎಂಬ ಆಶಾವಾದವನ್ನು ನಾನು ಹೊಂದಿದ್ದೇನೆ.''