ಕೊಡಗಿನಿಂದ 65 ಕಿ.ಮೀ ಹಾದು ಹೋಗುವ ಕೇರಳ ಸರ್ಕಾರದ ಉದ್ದೇಶಿತ ತಲಚೇರಿ - ಮೈಸೂರು ರೈಲು ಮಾರ್ಗ ಉದ್ದೇಶಿತ ಯೋಜನೆಯಿಂದ ಅರಣ್ಯ ನಾಶ ಹಾಗೂ ಮಳೆಯ ಪ್ರಮಾಣ ಕುಂಠಿತ
ಬೆಂಗಳೂರು[ಜು.10]: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇಂದು ವಿಧಾನಸೌಧದಲ್ಲಿ ಭೇಟಿಯಾಗಿ ಕೇರಳ ಸರ್ಕಾರದ ಉದ್ದೇಶಿತ ತಲಚೇರಿ - ಮೈಸೂರು ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು ಮನವಿಪತ್ರ ಸಲ್ಲಿಸಿದರು.
ಕೇರಳ ಸರ್ಕಾರದ ಈ ಯೋಜನೆಯು ದಕ್ಷಿಣ ಕೊಡಗು ಮಾರ್ಗವಾಗಿ 65 ಕಿ.ಮೀ ಹಾದಹೋಗುವುದರಿಂದ ಕೊಡಗಿನಲ್ಲಿ 2 ಲಕ್ಷ ಮರಗಳು ನಾಶವಾಗಲಿದೆ. ಇದರಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿ ಕಾವೇರಿ ನದಿ ನೀರಿನ ಹರಿಯುವಿಕೆಯ ಪ್ರಮಾಣ ಕೂಡ ಕಡಿಮೆಯಾಗಲಿದೆ. ಕೊಡಗಿನ ಹಲವು ಸಂಘಸಂಸ್ಥೆಗಳು, ನಾಗರಿಕರು ಈ ಯೋಜನೆಯನ್ನು ವಿರೋಧಿಸಿದ್ದಾರೆ. ಅರಣ್ಯ ನಾಶ ಹಾಗೂ ಪರಿಸರ ಹಾನಿ ದೃಷ್ಟಿಯಿಂದ ಯೋಜನೆಗೆ ಅನುಮತಿ ನೀಡಬಾರದೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
