ನನ್ನ ಮಗನಿಗೆ ದಯಾ ಮರಣ ಕರುಣಿಸಿ: ರಾಜೀವ್ ಹಂತಕನ ತಾಯಿ
ರಾಜೀವ್ ಹಂತಕನಾದ ತನ್ನ ಮಗನಿಗೆ ದಯಾಮರಣ ನೀಡುವಂತೆ ಪೆರಾರಿವಾಲನ್ ಅವರ ತಾಯಿ ಮನವಿ ಮಾಡಿದ್ದಾರೆ.
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೈದ ಪ್ರಕರಣ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ 7 ಮಂದಿಗೆ ಕ್ಷಮಾಪಣೆ ನೀಡಿ, ಅವರನ್ನು ಬಿಡುಗಡೆ ಮಾಡಬೇಕೆಂಬ ತಮಿಳುನಾಡು ಸರ್ಕಾರದ ಮನವಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಿರಸ್ಕರಿಸಿದ ಬೆನ್ನಲ್ಲೇ, ರಾಜೀವ್ ಹಂತಕನಾದ ತನ್ನ ಮಗನಿಗೆ ದಯಾಮರಣ ನೀಡುವಂತೆ ಪೆರಾರಿವಾಲನ್ ಅವರ ತಾಯಿ ಮನವಿ ಮಾಡಿದ್ದಾರೆ.
ನನ್ನ ಮಗ ಸೇರಿದಂತೆ ರಾಜೀವ್ ಹಂತಕರ ಎಲ್ಲರಿಗೂ ಕ್ಷಮಾದಾನ ನೀಡಿ ಬಿಡುಗಡೆ ಮಾಡಲು ಸಾಧ್ಯವಾಗದಿದ್ದರೆ, ನನ್ನ ಮಗನಿಗೆ ದಯಾ ಮರಣ ಕರುಣಿಸಿ ಎಂದು ರಾಜೀವ್ ಹಂತಕರಲ್ಲಿ ಒಬ್ಬನಾದ ಎ.ಜಿ.ಪೆರಾರಿವಾಲನ್ ತಾಯಿ ಅರ್ಪುತಾಮ್ಮಳ್ ಕೋರಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ದೀರ್ಘಾವಧಿಯ ಕಾನೂನು ಹೋರಾಟದಿಂದ ಮತ್ತು ಇತ್ತೀಚೆಗಿನ ಬೆಳವಣಿಗೆ ಕಂಡು ತುಂಬಾ ಬೇಸರವಾಗಿದೆ. ನಮಗೆ ಇಂಥ ಜೀವನವೇ ಬೇಡ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಮ್ಮನ್ನೆಲ್ಲ ಕೊಲ್ಲುವಂತೆ ಮನವಿ ಮಾಡಲು ನಿರ್ಧರಿಸಿದ್ದೇನೆ. ನನ್ನ ಮಗನಿಗೂ ದಯಾಮರಣ ನೀಡಿ, ಎಂದು ಹೇಳಿದ್ದಾರೆ.