ಪಾಕ್ ಪ್ರಧಾನಿ ವಿಶ್ವಾಸಾರ್ಹತೆ ಮೇಲೆ ಗಂಭೀರ ಪ್ರಶ್ನೆ!
ಇತ್ತೀಚೆಗಷ್ಟೇ ಭಾರತದೊಂದಿಗೆ ಶಾಂತಿ ಮಾತುಕತೆ ಪುನಾರಂಭಕ್ಕೆ ಆಹ್ವಾನಿಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶ್ವಾಸಾರ್ಹತೆಯನ್ನು ಗಂಭೀರವಾಗಿ ಪ್ರಶ್ನಿಸುವಂತೆ ಮಾಡಿದೆ. ಇದಕ್ಕೆ ಕಾರಣವಾಗಿದ್ದು ಗಡಿ ನುಸುಳಲು ಕಾಯುತ್ತಿರುವ ಉಗ್ರರ ಸಂಖ್ಯೆಯಲ್ಲಿನ ಹೆಚ್ಚಳವಾಗಿದೆ.
ಶ್ರೀನಗರ: ಸರ್ಜಿಕಲ್ ದಾಳಿ ನಡೆದು ಎರಡು ವರ್ಷ ಕಳೆಯುವಷ್ಟರಲ್ಲೇ, ದಾಳಿ ನಡೆಸಲಾಗಿದ್ದ ಪಾಕಿಸ್ತಾನದ ಗಡಿ ತಾಣದಲ್ಲಿ ಉಗ್ರ ಸಂಘಟನೆಗಳು ಮತ್ತೆ ಸಕ್ರಿಯಗೊಂಡಿವೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಇತ್ತೀಚೆಗಷ್ಟೇ ಭಾರತದೊಂದಿಗೆ ಶಾಂತಿ ಮಾತುಕತೆ ಪುನಾರಂಭಕ್ಕೆ ಆಹ್ವಾನಿಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶ್ವಾಸಾರ್ಹತೆಯನ್ನು ಗಂಭೀರವಾಗಿ ಪ್ರಶ್ನಿಸುವಂತೆ ಮಾಡಿದೆ.
ಪಾಕಿಸ್ತಾನ ಸೇನೆ ಬೆಂಬಲಿತ ಉಗ್ರ ಸಂಘಟನೆಗಳು ಗಡಿ ನಿಯಂತ್ರಣ ರೇಖೆಯ ಬಳಿ ಹೊಸದಾಗಿ 8 ಲಾಂಚ್ಪ್ಯಾಡ್ (ನೆಲೆ) ಸ್ಥಾಪಿಸಿಕೊಂಡಿವೆ. ಸುಮಾರು 250 ಉಗ್ರರು 27 ಲಾಂಚ್ ಪ್ಯಾಡ್ಗಳ ಮೂಲಕ ಜಮ್ಮು ಕಾಶ್ಮೀರದ ಒಳಕ್ಕೆ ನುಸುಳಲು ಸಜ್ಜಾಗಿದ್ದಾರೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.
2016 ರ ಸೆ. 29ರಂದು ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ವೇಳೆ ನಾಶ ಪಡಿಸಲಾದ ಎರಡು ಸ್ಥಳಗಳ ಪೈಕಿ ಒಂದಾದ ಲಿಪಾ ಕಣಿವೆಯಲ್ಲಿ ಉಗ್ರರು ಹೊಸದಾಗಿ 8 ಲಾಂಚ್ ಪ್ಯಾಡ್ ಸ್ಥಾಪಿಸಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭಾರತೀಯ ಯೋಧರು ಹತ್ಯೆ ಮಾಡುವುದಕ್ಕೂ ಮುನ್ನ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ೧೪ ಲಾಂಚ್ಪ್ಯಾಡ್ ಗಳಲ್ಲಿ 160 ಉಗ್ರರು ಅಡಗಿಕೊಂಡಿದ್ದರು.
ಆದರೆ, ಬುಹ್ರಾನ್ ವಾನಿ ಬಳಿಕ ಗಡಿಯಾಚೆಗೆ ಉಗ್ರರ ಚಟುವಟಿಕೆ ದಿಢೀರನೆ ಏರಿಕೆ ಕಂಡಿದ್ದು, ದಾಳಿಗೆ ಸಜ್ಜಾಗಿ ನಿಂತಿರುವ ಸಂಖ್ಯೆ 230 ಕ್ಕೆ ಏರಿಕೆಯಾಗಿದೆ. ಅದರಲ್ಲೂ ಇಮ್ರಾನ್ ಖಾನ್ ಪ್ರಧಾನಿ ಆದ ಬಳಿಕ 8 ಉಗ್ರರ ಶಿಬಿರಗಳು ಹೊಸದಾಗಿ ತಲೆ ಎತ್ತಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.