ಕರ್ಮಚಾರಿ ಹುದ್ದೆಗೆ ಬರೋಬ್ಬರಿ 20ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ...!
ಉತ್ತರಪ್ರದೇಶದ ನಗರಾಡಳಿತಗಳಲ್ಲಿ ಖಾಲಿಯಿರುವ 20 ಸಾವಿರ ಕರ್ಮಚಾರಿಗಳ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗಾಗಿ 20 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಲಖನೌ(ಡಿ.11): ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿಯೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವ ಸರ್ಕಾರಗಳು ಬಂದರೂ ಹುದ್ದೆಗಳನ್ನು ಸೃಷ್ಟಿಸಲು ಹೆಣಗಾಡುವ ಪರಿಸ್ಥಿತಿ ಬಂದೊದಗಿದೆ. ಯಾವುದೇ ಒಂದು ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅದೇ ರೀತಿಯ ಪರಿಸ್ಥಿತಿ ಇದೀಗ ಉತ್ತರ ಪ್ರದೇಶದಲ್ಲಿ ಬಂದೊದಗಿದೆ. ಉತ್ತರಪ್ರದೇಶದ ನಗರಾಡಳಿತಗಳಲ್ಲಿ ಖಾಲಿಯಿರುವ 20 ಸಾವಿರ ಕರ್ಮಚಾರಿಗಳ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗಾಗಿ 20 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಸಫಾಯಿ ಕರ್ಮಚಾರಿಗಳ ಹುದ್ದೆಗೆ ಇದೇ ಮೊದಲ ಬಾರಿಗೆ ಪ್ರಯೋಗಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕ ಪ್ರಕ್ರಿಯೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಟ 8ನೇ ತರಗತಿ ಪೂರೈಸಿರಬೇಕೆಂಬ ನಿಯಮವಿದೆ. ಆದರೆ ಎಂಎಸ್'ಸಿ, ಎಂಕಾಮ್ ಮತ್ತು ಎಂಬಿಎ ಪದವಿ ಪೂರೈಸಿದ ಅಭ್ಯರ್ಥಿಗಳು ಕರ್ಮಚಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಕೆಲಸ ಸಿಗುತ್ತದೆ ಎಂಬ ಭರವಸೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೇವಲ ಉತ್ತರಪ್ರದೇಶದಲ್ಲಿಯಷ್ಟೇ ಅಲ್ಲದೆ, ಜಾರ್ಖಂಡ್, ಅಸ್ಸಾಂ, ಕೋಲ್ಕತ್ತಾ, ದೆಹಲಿ ಮತ್ತು ಮುಂಬೈ ನಗರಗಳಲ್ಲೂ ಪದವೀಧರರು ಕರ್ಮಚಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ನೇಮಕ ಪ್ರಕ್ರಿಯೆಯಲ್ಲಿ ದಿನಕ್ಕೆ 100-500 ಅಭ್ಯರ್ಥಿಗಳನ್ನು ಸಂದರ್ಶನ ನಡೆಸುವ ನಗರಸಭೆಗಳು ಅಭ್ಯರ್ಥಿಗಳಿಂದ ರಸ್ತೆ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಪ್ರಯೋಗಾತ್ಮಕ ಕೆಲಸಕ್ಕೂ ದೂಡಲಾಗುತ್ತಿದೆ. ಕೆಲಸ ಗಿಟ್ಟಿಸಿಕೊಂಡರೆ ತಿಂಗಳಿಗೆ ₹15-17 ಸಾವಿರ ಸಂಪಾದಿಸಬಹುದೆಂಬ ಕಾರಣಕ್ಕೆ ಅಭ್ಯರ್ಥಿಗಳು ಚರಂಡಿ ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ.