ಕ್ಷೀಣವಾಗಲಿದೆ ಮುಂಗಾರಿನ ಪ್ರಮಾಣ
ದಕ್ಷಿಣ ಭಾರತದಲ್ಲಿ ಇದುವರೆಗೂ ಭಾರೀ ಪ್ರಮಾಣದಲ್ಲಿ ಸುರಿದ ಮುಂಗಾರು ಮಳೆ ಇನ್ನುಮುಂದೆ ಕುಸಿಯಲಿದೆ. ಆದರೆ ಉತ್ತರ ಭಾರತದಲ್ಲಿ ಹೆಚ್ಚಾಗಲಿದೆ ಎಂದು ಸ್ಕೈಮೆಟ್ ಸಂಸ್ಥೆ ಹೇಳಿದೆ.
ನವದೆಹಲಿ: ಖಾಸಗಿ ಹವಾಮಾನ ಮುನ್ಸೂಚನೆ ನೀಡುವ ಸ್ಕೈಮೆಟ್ ಸಂಸ್ಥೆ, ಮುಂಗಾರು ಕುರಿತ ತನ್ನ ಮುನ್ಸೂಚನೆಯನ್ನು ಬದಲಾವಣೆ ಮಾಡಿದೆ. ಈ ಹಿಂದೆ ಈ ವರ್ಷ ಸಾಮಾನ್ಯ ಸರಾಸರಿಯ ಮಳೆ ಸುರಿಯಲಿದೆ ಎಂದು ಹೇಳಿದ್ದ ಸಂಸ್ಥೆ ಅದನ್ನು ಇದೀಗ ಸಾಮಾನ್ಯಕ್ಕಿಂತ ಕಡಿಮೆ ಎಂದು ಬದಲಾಯಿಸಿದೆ.
ಈ ಮೂಲಕ ದೇಶದ ಹಲವು ಬಾಗಗಳಲ್ಲಿ ಮುಂಗಾರು ಕೊರತೆ ಉಂಟಾಗಬಹುದು ಎಂದು ಹೇಳಿದೆ. ಏಪ್ರಿಲ್ನಲ್ಲಿ ಅಂದಾಜಿಸಲಾದ ಪ್ರಕಾರ, ಜೂನ್-ಸೆಪ್ಟೆಂಬರ್ ಮುಂಗಾರು ಅವಧಿಯಲ್ಲಿ ದೀರ್ಘಾವಧಿ ಸರಾಸರಿ(ಎಲ್ಪಿಎ) ಶೇ.100 ರಷ್ಟಿರಲಿದೆ, ಇದರಲ್ಲಿ ಶೇ. 5ರಷ್ಟು ಹೆಚ್ಚು ಕಡಿಮೆ ಯಾಗಬಹುದು ಎಂದು ಸ್ಕೈಮೆಟ್ ಹೇಳಿತ್ತು. ಆದರೆ ಪ್ರಸ್ತುತ ಪರಿಷ್ಕೃತ ವರದಿಗಳ ಅನುಸಾರ, ಎಲ್ಪಿಎ ಶೇ.92ಕ್ಕೆ ಇಳಿಕೆಯಾಗಿದೆ. ಮುಂದಿನ ಒಂದು ವಾರ ದಕ್ಷಿಣ ಭಾರತದಲ್ಲಿ ಮಳೆ ಕಡಿಮೆ ಯಾಗಲಿದೆ, ಉತ್ತರ ಭಾರತದಲ್ಲಿ ಚೆನ್ನಾಗಿ ಮಳೆಯಾಗಲಿದೆ ಎಂದು ಸ್ಕೈಮೆಟ್ ಭವಿಷ್ಯ ನುಡಿದಿದೆ.
ಎಲ್ಪಿಎ ಶೇ. 96-104 ರ ಪ್ರಮಾಣ ದಲ್ಲಿದ್ದಾಗ ಅದನ್ನು ಸಹಜ ಮುಂಗಾರು ಎಂದು ಪರಿಗಣಿಸಲಾಗುತ್ತದೆ. ಹವಾಮಾನ ಇಲಾಖೆ ಏಪ್ರಿಲ್-ಮೇನಲ್ಲಿ ನಡೆಸಿದ್ದ ವಿಶ್ಲೇಷಣೆಯಲ್ಲಿ, ಶೇ.97 ಎಲ್ಪಿಎಯೊಂದಿಗೆ ಈ ಬಾರಿ ಸಹಜ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಸ್ಕೈಮೆಟ್ ವಿಶ್ಲೇಷಣೆಗೆ ಪ್ರತಿಕ್ರಿಯಿಸಿರುವ ಹವಾಮಾನ ಇಲಾಖೆ, ಮಳೆ ಕಡಿಮೆಯಾಗುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಮಳೆಯ ಪರಿಸ್ಥಿತಿ ಒಂದೇ
ವಾರದಲ್ಲಿ ಸಂಪೂರ್ಣ ಬದಲಾವಣೆ ತರಬಹುದು ಎಂದು ಭರವಸೆ ವ್ಯಕ್ತಪಡಿಸಿದೆ.