ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭರ್ಜರಿ ಗುಡ್ ನ್ಯೂಸ್  ನೀಡಿದೆ. ಇದೀಗ ಒಟ್ಟು 60 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು ಇದರಿಂದ ಭರ್ಜರಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. 

ಲಖನೌ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದಲ್ಲಿ ಬರೋಬ್ಬರಿ 60 ಸಾವಿರ ಕೋಟಿ ರು. ವೆಚ್ಚದ 81 ಯೋಜನೆಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಅಂದರೆ 80 ಕೋಟಿ ಕ್ಷೇತ್ರಗಳನ್ನು ಹೊಂದಿರುವ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ತರಪ್ರದೇಶದಲ್ಲಿ ಮೋದಿ ಅವರು ಬೃಹತ್ ಮೊತ್ತದ ಯೋಜನೆ ಗಳಿಗೆ ಚಾಲನೆ ನೀಡಿರುವುದು ಮಹತ್ವದ್ದಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೆ ಹಿಂದುಳಿದಿರುವ ಉತ್ತರಪ್ರದೇಶದಲ್ಲಿ ಕೈಗಾರಿಕೀಕರಣಕ್ಕೆ ಒತ್ತು ನೀಡಿದಂತಾಗಿದೆ. ಈ ಯೋಜನೆಗಳಿಂದ 2 ಲಕ್ಷ ಉದ್ಯೋಗ ಸೃಷ್ಟಿ ಯಾಗುವ ನಿರೀಕ್ಷೆ ಇದೆ. ಭೂಮಿಪೂಜೆ ಕಾರ್ಯಕ್ರಮದಲ್ಲಿ ಆದಿತ್ಯ ಬಿರ್ಲಾ ಸಮೂಹದ ಕುಮಾರ ಮಂಗಳಂ ಬಿರ್ಲಾ, ಅದಾನಿ ಸಮೂಹದ ಗೌತಮ್ ಅದಾನಿ, ಎಸ್ಸೆಲ್ ಗ್ರೂಪ್‌ನ ಸುಭಾಷ್ ಚಂದ್ರ, ಐಟಿಸಿ ಕಂಪನಿ ವ್ಯವಸ್ಥಾಪಕ ನಿರ್ದೆಶಕ ಸಂಜೀವ್ ಪುರಿ ಸೇರಿದಂತೆ 80 ಖ್ಯಾತನಾಮ ಉದ್ಯಮಿಗಳು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಮೋದಿ ಅವರು, ಇಂದಿನ ಕಾರ್ಯಕ್ರಮವನ್ನು ಗ್ರೌಂಡ್ ಬ್ರೇಕಿಂಗ್ (ಶಂಕುಸ್ಥಾಪನೆ) ಕಾರ್ಯಕ್ರಮ ಎಂದು ಕೆಲವರು ಕರೆಯುತ್ತಾರೆ. 

ಆದರೆ ಇದು ರೆಕಾರ್ಡ್ ಬ್ರೇಕಿಂಗ್ (ದಾಖಲೆಯ) ಕಾರ್ಯಕ್ರಮ. ನಾನೂ ದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದೆ. 60 ಸಾವಿರ ಕೋಟಿ ರು. ಹೂಡಿಕೆ ಅತಿದೊಡ್ಡ ಸಾಧನೆ. ಹೀಗಾಗಿ ಅಧಿಕಾರಿಗಳಿಗೆ ಧನ್ಯವಾದ ಹೇಳುವೆ ಎಂದು ತಿಳಿಸಿದರು. ಫೆಬ್ರವರಿಯಲ್ಲಷ್ಟೇ ಉತ್ತರಪ್ರದೇಶದಲ್ಲಿ ಹೂಡಿಕೆದಾರರ ಸಮಾವೇಶ ನಡೆದಿತ್ತು.

ಪ್ರತಿಪಕ್ಷಗಳು ಕೈಗಾರಿಕೋದ್ಯಮಿಗಳನ್ನು ಕಳ್ಳರು ಹಾಗೂ ಲೂಟಿಕೋರರು ಎಂದು ಕರೆಯುತ್ತಿವೆ. ಆದರೆ, ರೈತರು, ಬ್ಯಾಂಕರ್‌ಗಳು, ಸರ್ಕಾರಿ ನೌಕರರು, ಕಾರ್ಮಿಕ ರ ರೀತಿಯಲ್ಲೇ ಅವರು ಕೂಡ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ನಿಮ್ಮ ಉದ್ದೇಶ ಸ್ಪಷ್ಟ ಹಾಗೂ ಒಳ್ಳೆಯದಾಗಿದ್ದರೆ ಯಾರ ಜತೆಗೆ ನಿಂತರೂ ನಿಮ್ಮ ಮೇಲೆ ಕಲೆ ಮೆತ್ತಲಾಗದು. ಗಾಂಧೀಜಿ ಅವರ ಉದ್ದೇಶ ಶುದ್ಧವಾಗಿದ್ದ ಕಾರಣಕ್ಕೇ ಅವರು ಬಿರ್ಲಾ ಕುಟುಂಬದ ಜತೆ ಉಳಿದುಕೊಳ್ಳಲು ಹಿಂಜರಿಕೆ ತೋರಿರಲಿಲ್ಲ. ನನಗೂ ಉದ್ಯಮಿಗಳ ಜತೆ ನಿಲ್ಲಲು ನನಗೆ ಹೆದರಿಕೆ ಇಲ್ಲ. ನನ್ನ ಉದ್ದೇಶ ಸ್ಪಷ್ಟವಾಗಿದೆ.

ನರೇಂದ್ರ ಮೋದಿ ಪ್ರಧಾನಿ