ವಿವೇಕಾನಂದರಂತೆ ಮೋದಿ ಅವರೂ ವಿಶ್ವಗುರು ಆಗಲಿದ್ದಾರೆ..
ಸ್ವಾಮಿ ವಿವೇಕಾನಂದರ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ ಎಂದು ಮೋದಿ ಅವರ ಸೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಶ್ಲಾಘಿಸಿದ್ದಾರೆ.
ಬೆಂಗಳೂರು (ಜ.13): ಸ್ವಾಮಿ ವಿವೇಕಾನಂದರ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ ಎಂದು ಮೋದಿ ಅವರ ಸೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಶ್ಲಾಘಿಸಿದ್ದಾರೆ.
ಬಸವನಗುಡಿಯ ಶ್ರೀ ಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿವೇಕಾನಂದರ 155ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಎಂಬುದು ಹೆಸರಿಗೆ ಮಾತ್ರವಲ್ಲ ವಿಚಾರ ಧಾರೆಗಳಲ್ಲಿ ಸಹ ಅವರಿಬ್ಬರಲ್ಲಿ ಸಾಮ್ಯತೆ ಇದೆ ಎಂದರು.
ಹಿಂದೂ ಧರ್ಮದ ಪುನರುತ್ಥಾನಕ್ಕಾಗಿಯೇ ವಿವೇಕಾನಂದರು ಹುಟ್ಟಿದರು. ಆ ಮಹಾನ್ ಚೇತನವು ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಸ್ತಂಗತವಾಗಿದ್ದು ನೋವಿನ ಸಂಗತಿಯಾಗಿದೆ. ಭಾರತದ ರಾಜಕಾರಣದಲ್ಲಿ ವಿವೇಕಾನಂದರ ವಿಚಾರಗಳು ಹಾಗೂ ಚಾಣಕ್ಯ ನೀತಿ ಬಹುಮುಖ್ಯವಾಗಿವೆ. ಪ್ರಸುತ್ತ ದಿನಗಳಲ್ಲೂ ಅವರಿಬ್ಬರ ನೀತಿಗಳ ಆಧಾರದ ಮೇಲೆ ದೇಶದ ರಾಜ ಕಾರಣ ನಡೆದಿದೆ. ಈ ಎರಡು ವಿಚಾರಧಾರೆಗಳನ್ನು ನರೇಂದ್ರ ಮೋದಿ ಅವರಲ್ಲಿ ಕಾಣಬಹುದಾಗಿದೆ ಎಂದು ನುಡಿದರು.
ನಾನು ಪ್ರಧಾನ ಮಂತ್ರಿಗಳ ಸಹೋದರನಾದರೂ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದೇನೆ. ಇಲ್ಲಿ ಯಾರೂ ದೊಡ್ಡವರೂ ಅಲ್ಲ ಚಿಕ್ಕವರೂ ಅಲ್ಲ. ವಿವೇಕಾನಂದರು ಕೇವಲ ಭಾರತಕ್ಕೆ ಸೀಮಿತವಲ್ಲ. ಅವರೊಬ್ಬರು ವಿಶ್ವಗುರು. ಮುಂದೆ ನರೇಂದ್ರ ಮೋದಿ ಅವರು ಸಹ ವಿಶ್ವಗುರು ಆಗುತ್ತಾರೆ. ಭವಿಷ್ಯದಲ್ಲಿ ನರೇಂದ್ರ ಅನ್ನೋ ಹೆಸರು ಭಾರತದಲ್ಲಿ ಒಕ್ಕೊರಲವಾಗಿ ಧ್ವನಿ ಸುತ್ತದೆ. ಎಲ್ಲೆಡೆ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರ ವೂ ಹರಡುತ್ತದೆ ಎಂದು ಪ್ರಹ್ಲಾದ್ ಮೋದಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಶಿಕ್ಷಕರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.