ಸರ್ಕಾರದ ವಿರುದ್ಧವೇ 'ಸಿಎಂ' ಆಕ್ರೋಶ
ಸರ್ಕಾರದಲ್ಲಿ ಲಿಂಗಾಯಿತರು, ಬ್ರಾಹ್ಮಣರು, ಒಕ್ಕಲಿಗರೇ ಹೆಚ್ಚಿದ್ದಾರೆ. ಸರ್ಕಾರದಲ್ಲಿ ಷೇರು ಇಲ್ಲದವರೇ ಹೆಚ್ಚು ಮಾತನಾಡುತ್ತಿದ್ದಾರೆ. ಶೇರ್ ಇದ್ದ ನಾವು ಡಿವೆಡೆಂಟ್ ಕೇಳ್ತಾ ಇದ್ದೀವಿ.
ಬೆಂಗಳೂರು[ಆ.31]: ತಮ್ಮ ಸಮುದಾಯಕ್ಕೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧವೇ ಕಾಂಗ್ರೆಸಿನ ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ನಲ್ಲಿ ರಾಜ್ಯದಲ್ಲಿ ಭಾರೀ ಬದಲಾವಣೆಯಾಗಲಿದೆ. ನಮ್ಮ ಸಮುದಾಯಕ್ಕೆ ಸರ್ಕಾರದಲ್ಲಿ ಉನ್ನತ ಸ್ಥಾನ ಸಿಕ್ಕಿಲ್ಲ. ಅದಲ್ಲದೆ ಸಮ್ಮಿಶ್ರ ಸರ್ಕಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳೊ ಅಧಿಕಾರವನ್ನು ಕೊಟ್ಟಿಲ್ಲ. ನಮ್ಮ ಸಮುದಾಯ ಕೇವಲ ಉತ್ಸವ ಮೂರ್ತಿಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಲಿಂಗಾಯಿತರು, ಬ್ರಾಹ್ಮಣರು, ಒಕ್ಕಲಿಗರೇ ಹೆಚ್ಚಿದ್ದಾರೆ. ಸರ್ಕಾರದಲ್ಲಿ ಷೇರು ಇಲ್ಲದವರೇ ಹೆಚ್ಚು ಮಾತನಾಡುತ್ತಿದ್ದಾರೆ. ಶೇರ್ ಇದ್ದ ನಾವು ಡಿವೆಡೆಂಟ್ ಕೇಳ್ತಾ ಇದ್ದೀವಿ. ನಮ್ಮ ಸಮುದಾಯಕ್ಕೆ ಅಧಿಕಾರಕ್ಕಿಂತ ಮಾನ ಮುಖ್ಯ. ನಿರ್ಧಾರ ಕೈಗೊಳ್ಳುವಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ. ಸದ್ಯ ನಾನು ಉತ್ತರ ಕರ್ನಾಟಕ ಪ್ರವಾಸ ಮಾಡುತ್ತಿದ್ದು ಸೆಪ್ಟೆಂಬರ್'ನಲ್ಲಿ ಅದು ಮುಗಿಯಲಿದೆ. ಆ ಬಳಿಕ ನನ್ನ ಶಕ್ತಿಯನ್ನು ತೋರ್ಪಡಿಸುತ್ತೇನೆ ಎಂದು ಮುಂದಿನ ಯೋಜನೆಗಳ ಬಗ್ಗೆ ಸುಳಿವು ನೀಡಿದರು.
ಸಚಿವ ಸ್ಥಾನ ಕೇಳೋದಿಲ್ಲ
ನನ್ನ ಸಾಮರ್ಥ್ಯ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ಒಬ್ಬಂಟಿ ಅಲ್ಲ. ನನ್ನ ಹಿಂದೆ ಸಾಕಷ್ಟು ಜನರಿದ್ದಾರೆ. ಹಾಲಿ ಸಂಪುಟದಲ್ಲಿರುವ ನಮ್ಮ ಸಮುದಾಯದವರು ಕೇವಲ ಉತ್ಸವ ಮೂರ್ತಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ನಮ್ಮ ಸಮುದಾಯ ತುಳಿತಕ್ಕೆ ಒಳಗಾಗಿದೆ. ಇದನ್ನು ಮೇಲಕ್ಕೆತ್ತುವ ಪ್ರಯತ್ನ ಯಾರಿಂದಲೂ ಆಗುತ್ತಲ್ಲ. ಕೆಲವೇ ದಿನಗಳಲ್ಲಿ ಸರ್ಕಾರದಲ್ಲಿ ಭಾರಿ ಬರದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದರು.