Fact Check: ವಿಸರ್ಜಿಸುವ ಬದಲು ರೋಡಲ್ಲೇ ಸಾವಿರಾರು ಗಣಪತಿ ಬಿಟ್ಟು ಹೋದರಾ?
ರಸ್ತೆಯಲ್ಲೇ ಸಾವಿರಾರು ಗಣಪತಿಗಳ ವಿಗ್ರಹಗಳು| ವಿಸರ್ಜನೆ ಮಾಡದೇ ರಸ್ತೆಯಲ್ಲಿ ಎಸೆದು ಹೋದರೆ?| ಗುಜರಾತ್ ಅಹಮದಾಬಾದ್ನ ಸಾಬರಮತಿ ನದಿ ದಂಡೆ ಬಳಿ ಸಾವಿರಾರು ವಿಗ್ರಹಗಳು| ಪರಿಸರ ಮಾಲಿನ್ಯದ ಕುರಿತು ಆತಂಕ ವ್ಯಕ್ತಪಡಿಸಿದ ನೆಟಿಜನ್ಗಳು | ವಿಡಿಯೋ ಸತ್ಯಾಸತ್ಯತೆ ತಿಳಿಸಿದ ಸ್ಥಳೀಯ ನಿವಾಸಿ ಅಂಕುರ್ ಸಿಂಗ್| ನದಿ ಮಾಲಿನ್ಯ ತಡೆಗಟ್ಟಲು ದಂಡೆ ಬಳಿ ದಶ್ಮಾ ಮೂರ್ತಿ ಬಿಟ್ಟ ಜನ| ವಿಸರ್ಜನೆಗೆ ನಿಗದಿಪಡಿಸಿದ ಸ್ಥಳದಲ್ಲಿ ದಶ್ಮಾ ಮೂರ್ತಿಗಳ ವಿಸರ್ಜನೆ ಮಾಡಿದ ನಗರಾಡಳಿತ|
ಅಹಮದಾಬಾದ್(ಸೆ.11): ವಿಸರ್ಜನೆಗೆಂದು ತಂದ ಸಾವಿರಾರು ಗಣಪತಿ ಮೂರ್ತಿಗಳನ್ನು ರಸ್ತೆಯಲ್ಲೇ ಬಿಟ್ಟು ಹೋಗಲಾಗಿದೆ ಎಂಬರ್ಥದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ಸತ್ಯಾಸತ್ಯತೆ ಕುರಿತು ಭಾರೀ ಚರ್ಚೆಯಾಗುತ್ತಿದೆ.
ಗುಜರಾತ್ನ ಅಹಮದಾಬದ್ನಲ್ಲಿ ಸಾಬರಮತಿ ನದಿಯಲ್ಲಿ ವಿಸರ್ಜನೆಗೆ ಅವಕಾಶ ನೀಡಲಿಲ್ಲ ಎಂದು ಸಾವಿರಾರು ಗಣಪತಿಗಳನ್ನು ರಸ್ತೆಯಲ್ಲೇ ಬಿಡಲಾಗಿದೆ ಎಂಬ ವಿಡಿಯೋ ಹರಿದಾಡುತ್ತಿತ್ತು. ಈ ವಿಡಿಯೋ ವಿಕ್ಷೀಸಿದ್ದ ಕೆಲವರು ಪರಿಸರ ಮಾಲಿನ್ಯದ ಆತಂಕ ವ್ಯಕ್ತಪಡಿಸಿದ್ದರು.
ಆದರೆ ಅಂಕುರ್ ಸಿಂಗ್ ಎಂಬುವವರು ಈ ವಿಡಿಯೋ ಸತ್ಯಾಸತ್ಯತೆ ತಿಳಿಸಿದ್ದು, ಅಸಲಿಗೆ ಇವು ಗಣೇಶನ್ ವಿಗ್ರಹಗಳಲ್ಲ ಬದಲಿಗೆ ದಶ್ಮಾ ವಿಗ್ರಹಗಳಾಗಿದ್ದು, ನದಿಯಲ್ಲಿ ವಿಸರ್ಜನೆ ಮಾಡಿ ನದಿಯನ್ನು ಮಲಿನಗೊಳಿಸುವ ಬದಲು ಜನರೇ ಖುದ್ದಾಗಿ ದಶ್ಮಾ ಮೂರ್ತಿಗಳನ್ನು ಸಾಬರಮತಿ ನದಿ ದಂಡೆ ಬಳಿ ಇಟ್ಟು ಹೋಗಿದ್ದಾರೆ.
ನಂತರ ನಗರಾಡಳಿತ ಈ ಮೂರ್ತಿಗಳನ್ನು ಸಂಗ್ರಹಿಸಿ ಮೂರ್ತಿ ವಿಸರ್ಜನೆಗೆ ನಿಗದಿಪಡಿಸಿರುವ ನಿರ್ದಿಷ್ಟ ಸ್ಥಳದಲ್ಲಿ ವಿಸರ್ಜನೆ ಮಾಡಿದ್ದಾರೆ ಎಂದು ಅಂಕುರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
"