ಪಾಕಿಸ್ತಾನ ವಿರುದ್ಧ ಸುಷ್ಮಾ ಸ್ವರಾಜ್ ಸರ್ಜಿಕಲ್ ಸ್ಟ್ರೈಕ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಎಲ್ಲಾ ದೇಶಗಳ ಮುಂದೆ ಪಾಕಿಸ್ತಾನದ ಮಾನ ಹರಾಜು ಹಾಕಿದ್ದು, ಸುಷ್ಮಾ ವೀರಾವೇಶದ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
ನವದೆಹಲಿ, [ಸೆ.29]: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ವಿಶ್ವಸಂಸ್ಥೆ ಸಮ್ಮೇಳನದಲ್ಲಿ ವೀರಾವೇಶದ ಭಾಷಣ ಮಾಡಿದ್ದು, ಪಾಕಿಸ್ತಾನದ ಅಸಲಿ ಮುಖವಾಡದ ವಾಸ್ತವಾಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಆಕ್ರೋಶದಿಂದ ಮಾತನಾಡಿದ ಸುಷ್ಮಾ ಸ್ವರಾಜ್, ಉಗ್ರರನ್ನು ಹಿಮ್ಮೆಟ್ಟಿಸಲು ಪಾಕಿಸ್ತಾನ ಯಾವುದೇ ರೀತಿ ಸಹಕಾರ ನೀಡುತ್ತಿಲ್ಲ. ಬದಲಾಗಿ ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರಂತೆ ಗೌರವಿಸುತ್ತಿದೆ ಎಂದು ಕಿಡಿ ಕಾರಿದರು.
ಮುಂಬೈ ದಾಳಿ 26/11 ಮಾಸ್ಟರ್ ಮೈಂಡ್ ಶಿಕ್ಷಿಸಲು ಪಾಕ್ ಬಿಡುತ್ತಿಲ್ಲ. ಉಗ್ರನನ್ನು ಶಿಕ್ಷಿಸಲು ಭಾರತದ ಜತೆಗೆ ಮಾತುಕತೆಗೂ ಬರುತ್ತಿಲ್ಲ. ನಿರಂತರವಾಗಿ ಭಾರತ ಜತೆ ಪಾಕಿಸ್ತಾನದಿಂದ ನಂಬಿಕೆ ದ್ರೋಹ ಕೃತ್ಯ ಆಗುತ್ತಿದೆ ಎಂದು ಸುಷ್ಮಾ ಗಂಭೀರ ಆರೋಪ ಮಾಡಿದರು.
ರಾಕ್ಷಸಿ ಭಯೋತ್ಪಾಕರು ವಿಶ್ವದಲ್ಲೆಡೆ ದಿನೇ ದಿನೇ ಬೆಳೆಯುತ್ತಿದ್ದಾರೆ ಎಂದು ಭಯೋತ್ಪಾದಕತೆ ವಿರುದ್ಧ ಸುಷ್ಮಾ ಸ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಭಯೋತ್ಪಾದನೆ ಹುಟ್ಟಡಗಿಸುವುದಕ್ಕೆ ವಿಶ್ವದ ಸಹಕಾರ ಕೋರಿದರು.