ನಾಟ್ ರೀಚಬಲ್ ಆದ ಸಚಿವೆ ಜಯಮಾಲ
ಕರ್ನಾಟಕದ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಹೊಣೆ ಹೊತ್ತ ಸಚಿವರಾದ ಜಯಮಾಲಾ ಅವರು ಕಿರಣ್ ಮಜುಮ್ ದಾರ್ ಶಾ ವಿಚಾರದಲ್ಲಿ ಯಾವುದೇ ರೀತಿಯಾದ ಹೇಳಿಕೆ ನೀಡದೇ ಮೌನವಹಿಸಿದ್ದಾರೆ.
ಬೆಂಗಳೂರು : ಕನ್ನಡ ಸಾಹಿತಿಗಳು, ಹೋರಾಟಗಾರರ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ಕಿರಣ್ ಮಜುಂದಾರ್ ಶಾ ವಿರುದ್ಧ ನಾಡಿನೆಲ್ಲೆಡೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ವಯಂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಕನ್ನಡ ವಿವಿ ಕುಲಪತಿಗಳು ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಆದರೆ, ಕನ್ನಡ ಮತ್ತು ಸಂಸ್ಕೃತಿ ಖಾತೆಯ ಹೊಣೆ ಹೊತ್ತ ಸಚಿವರಾದ ಜಯಮಾಲಾ ಅವರು ಮಾತ್ರ ಈ ವಿಚಾರದಲ್ಲಿ ಮೌನವಾಗಿದ್ದಾರೆ.
ಅಷ್ಟೇ ಅಲ್ಲ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕನ್ನಡಪ್ರಭ ಸತತವಾಗಿ ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ನೀಡಲಿಲ್ಲ. ಕಿರಣ್ ಮಜುಂದಾರ್ ಅವರ ಹೇಳಿಕೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವರ ಹೇಳಿಕೆ ಪಡೆಯಲು ಸಚಿವರಿಗೆ ಸರ್ಕಾರ ಕೊಟ್ಟಿರುವ ಮೊಬೈಲ್ ಸಂಖ್ಯೆ 98440 14908ಗೆ ಸಂಪರ್ಕಿಸಲು ಅನೇಕ ಬಾರಿ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.
ಸಚಿವರ ಮೊಬೈಲ್ ರಿಂಗಣಿಸಿದರೂ ಯಾರೂ ಕರೆ ಸ್ವೀಕರಿಸಲಿಲ್ಲ. ಎಸ್ಎಂಎಸ್ ಸಂದೇಶ ಕಳುಹಿಸಿದರೂ ಪ್ರತಿಕ್ರಿಯೆ ಬರಲಿಲ್ಲ. ಇನ್ನು ಅವರ ಆಪ್ತ ಕಾರ್ಯದರ್ಶಿ ಅವರ ಮೊಬೈಲ್ಗೆ ಕರೆ ಮಾಡಿದರೆ, ಸ್ವೀಚ್ ಆಫ್ ಎಂದು ಬರುತ್ತಿತ್ತು.