ಹೊರ ರಾಜ್ಯದ ಹಾಲಿಗೆ ನಿಷೇಧ?
ರಾಜ್ಯಕ್ಕೆ ಹೊರ ರಾಜ್ಯಗಳಿಂದ ಆಮದಾಗುತ್ತಿರುವ ಹಾಲನ್ನು ನಿರ್ಬಂಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.
ವಿಧಾನಪರಿಷತ್ : ರಾಜ್ಯಕ್ಕೆ ಹೊರ ರಾಜ್ಯಗಳಿಂದ ಆಮದಾಗುತ್ತಿರುವ ಹಾಲನ್ನು ನಿರ್ಬಂಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದರು.
ಗುರುವಾರ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಎನ್.ರವಿ ಬಜೆಟ್ ಕುರಿತ ಚರ್ಚೆ ವೇಳೆ ಮಾತನಾಡುವ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಪ್ರತಿಕ್ರಿಯಿಸಿದ ಅವರು, ಪ್ರತಿ ದಿನ ಬೆಂಗಳೂರಿಗೆ 10 ಲಕ್ಷ ಲೀಟರ್ ಹೊರ ರಾಜ್ಯದ ಹಾಲು ಆಮದಾಗುತ್ತಿದೆ. ಕೆಎಂಎಫ್ಗಿಂತ ಈ ಹಾಲಿನ ಗುಣಮಟ್ಟಅತ್ಯಂತ ಕಡಿಮೆ ದರ್ಜೆಯದಾಗಿದೆ. ಉತ್ತರ ಕರ್ನಾಟಕ ಭಾಗಕ್ಕೂ ಮಹಾರಾಷ್ಟ್ರದಿಂದ ಹಾಲು ಆಮದಾಗುತ್ತಿದ್ದು, ಅದನ್ನು ತಡೆಯಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಮ್ಮ ಮಾತು ಮುಂದುವರೆಸಿದ ರವಿ, ರಾಜ್ಯದಲ್ಲಿ ಪ್ರತಿ ದಿನ ಸುಮಾರು 85 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಅದರಲ್ಲಿ ಬಮೂಲ್ ಒಂದರಲ್ಲಿಯೇ 16ರಿಂದ 17 ಲಕ್ಷ ಕೆ.ಜಿ. ಹಾಲು ಸಂಗ್ರಹವಾಗುತ್ತಿದೆ. ಜೂ.14ರಂದು ದಾಖಲೆಯ 18 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಹಾಲನ್ನು ಉಪ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಮತ್ತು ಮಾರುಕಟ್ಟೆಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ 13 ಒಕ್ಕೂಟಗಳಿಗೂ ಬೃಹತ್ ಹಾಲಿನ ಡೇರಿಗಳನ್ನು ತೆರೆಯಲು ಸರ್ಕಾರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.
ರೇಷ್ಮೆಗೆ ರಕ್ಷಣಾತ್ಮಕ ಬೆಲೆ ಘೋಷಿಸಿ: ಸಂಕಷ್ಟದಲ್ಲಿ ಇರುವ ರೇಷ್ಮೆ ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕು. ರೇಷ್ಮೆಗೆ ರಕ್ಷಣಾತ್ಮಕ ಬೆಂಬಲ ಬೆಲೆ ಘೋಷಿಸಬೇಕು. ರೇಷ್ಮೆ ಬೆಳೆಗಾರರ ಅಭಿವೃದ್ಧಿಗಾಗಿ ರಚಿಸಲಾಗಿದ್ದ ಬಸವರಾಜ ಸಮಿತಿ ವರದಿ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಕುಟುಂಬಗಳು ರೇಷ್ಮೆ ಕೃಷಿಯ ಮೇಲೆ ಅವಲಂಬಿತವಾಗಿವೆ. ಮಾರುಕಟ್ಟೆಯಲ್ಲಿ ಸಿಬಿ ರೇಷ್ಮೆಗೆ . 280 ಇದ್ದು, .300ಕ್ಕೆ ಹಾಗೂ ಬಯೋಟಿನ್ ರೇಷ್ಮೆಗೆ . 325ರಿಂದ . 375ಕ್ಕೆ ಹೆಚ್ಚಿಸಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಮನವಿ ಮಾಡಿದರು.