ಮಹಾಮೈತ್ರಿಕೂಟದೊಂದಿಗೆ ಕೈ ಜೋಡಿಸಲಿದ್ದಾರೆ ಎಂದು ಹೇಳಲಾಗಿದ್ದ ಮಾಯಾವತಿ ಇದೀಗ ಕೈ ಕೊಟ್ಟು ಮತ್ತೊಂದು ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆ. 

ರಾಯ್‌ಪುರ: ಮಹತ್ವದ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟಿರುವ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಛತ್ತೀಸ್‌ಗಢ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಿಡಿದೆದ್ದು ಜನತಾ ಕಾಂಗ್ರೆಸ್‌ (ಛತ್ತೀಸ್‌ಗಢ) ಎಂಬ ಪಕ್ಷ ಸ್ಥಾಪನೆ ಮಾಡಿಕೊಂಡಿರುವ ಅಜಿತ್‌ ಜೋಗಿ ಅವರೊಂದಿಗೆ ಮೈತ್ರಿ ಘೋಷಿಸಿದ್ದಾರೆ. 

ಇದರೊಂದಿಗೆ ಮಹಾಮೈತ್ರಿಕೂಟದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದೆ. ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಎಸ್‌ಪಿ 35 ಸ್ಥಾನದಲ್ಲಿ ಹಾಗೂ ಜನತಾ ಕಾಂಗ್ರೆಸ್‌ 55 ಸ್ಥಾನದಲ್ಲಿ ಸ್ಪರ್ಧೆ ಮಾಡಲಿವೆ ಎಂದು ಜೋಗಿ ಅವರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಯಾವತಿ ಅವರು ಗುರುವಾರ ಪ್ರಕಟಿಸಿದರು.

ಈ ಮುನ್ನ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆಯನ್ನು ಕಾಂಗ್ರೆಸ್‌ ವ್ಯಕ್ತಪಡಿಸಿತ್ತು. ಛತ್ತೀಸ್‌ಗಢದಲ್ಲಿ ಶೇ.12 ದಲಿತ ಮತಗಳಿದ್ದು, ಇವುಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿತ್ತು. ಈಗ ಮಾಯಾ ನಡೆಯಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ಬಿಜೆಪಿ ಅಣತಿಯ ಮೇರೆಗೆ ಈ ಮೈತ್ರಿ ನಡೆದಿದೆ’ ಎಂದು ಕಿಡಿಕಾರಿದೆ.