ಸಮೀರ್ ಟೈಗರ್ ಕೊಂದು ಹುತಾತ್ಮನಾಗಿದ್ದ ಔರಂಗಜೇಬ್ಗೆ ಅತ್ಯುನ್ನತ ಗೌರವ
ಸಾಹಸ ಮೆರೆದಿದ್ದ ಸೈನಿಕರಿಗೆ ಸ್ವಾತಂತ್ರ್ಯ ದಿನದಂದು ಗೌರವ ಸಲ್ಲಿಕೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಅಪ್ರತಿಮ ಧೈರ್ಯ ಶೌರ್ಯ ತೋರಿದ್ದ ರೈಫಲ್ ಮ್ಯಾನ್ ಔರಂಗಜೇಬ್ (ಮರಣೋತ್ತರ) ಅವರಿಗೆ ಈ ವರ್ಷದ ಶೌರ್ಯ ಚಕ್ರ ದೊರೆತಿದೆ.
ನವದೆಹಲಿ[ಆ.13] ಭಾರತ ಸೇನೆಯ ವೀರ ಯೋಧ ಔರಂಗಜೇಬ್ ರನ್ನು ಈದ್ ಹಬ್ಬದ ವೇಳೆ ಅಪಹರಿಸಿದ್ದ ಉಗ್ರರು ನಂತರ ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದರು. ಗುಂಡಿನ ದಾಳಿಯಿಂದ ಸಂಪೂರ್ಣ ಛಿದ್ರಗೊಂಡ ಯೋಧನ ದೇಹ ಪುಲ್ವಾಮಾ ಜಿಲ್ಲೆಯಲ್ಲಿ ಪತ್ತೆಯಾಗಿತ್ತು.
ರಜೌರಿ ನಿವಾಸಿಯಾಗಿದ್ದ ಯೋಧ ಔರಂಗಜೇಬ್ ರಂಜಾನ್ ರಜೆಗಾಗಿ ಮನೆಗೆ ಆಗಮಿಸಿದ್ದರು. ಅವರನ್ನು ಲಾಂಪೋರಾದ ಬಳಿ ಅಪಹರಣ ಮಾಡಲಾಗಿತ್ತು. ಶೋಪಿಯಾನ್ನಲ್ಲಿ 44 ರೈಫಲ್ಸ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದರು.
ಔರಂಗಜೇಬ್ ಅವರು ಜಮ್ಮು ಕಾಶ್ಮೀರ ನಾಲ್ಕನೇ ಲೈಟ್ ಇನ್ಫ್ಯಾಂಟ್ರಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹಿಜ್ಬುಲ್ ಮುಜಾಹಿದೀನ್ ಉಗ್ರ ಸಮೀರ್ ಟೈಗರ್ನನ್ನು ಎನ್ಕೌಂಟರ್ ಮಾಡಿದ್ದ ತಂಡದಲ್ಲಿ ಔರಂಗಜೇಬ್ ಇದ್ದರು.