ಮಂಡ್ಯ ರಾಜಕೀಯ ಢವಢವ: ಹುತಾತ್ಮನ ಪತ್ನಿ ಬರ್ತಾಳವ್ವ?
ಮಂಡ್ಯ ರಾಜಕೀಯದಲ್ಲಿ ಬೀಸಿದ ಹೊಸ ರಾಜಕೀಯ ಬಿರುಗಾಳಿ| ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಹುತಾತ್ಮ ಯೋಧ ಗುರು ಪತ್ನಿ?| ಗುರು ಪತ್ನಿಗೆ ಟಿಕೆಟ್ ನೀಡುವಂತೆ ಬಿಎಸ್ ಪಿ ನಾಯಕ ದ್ವಾರಕಾನಾಥ್ ಸಲಹೆ| ಬಿಎಸ್ ಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ದ್ವಾರಕಾನಾಥ್| ದ್ವಾರಕಾನಾಥ್ ಸಲಹೆಗೆ ಮಿಶ್ರ ಪ್ರತಿಕ್ರಿಯೆ|
ಮಂಡ್ಯ(ಮಾ.07): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸುಮಲತಾ ಅಂಬರೀಷ್, ನಿಖಿಲ್ ಕುಮಾರಸ್ವಾಮಿ ಸುತ್ತ ಗಿರಕಿ ಹೊಡೆಯುತ್ತಿದ್ದ ರಾಜಕೀಯ ಇದೀಗ ಪುಲ್ವಾಮಾ ದಾಳಿಯ ಹುತಾತ್ಮ ಗುರು ಅವರ ಪತ್ನಿಯತ್ತ ತಿರುಗಿದೆ.
ಹೌದು, ಮಂಡ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿಯೊಂದು ಬೀಸಿದ್ದು, ಹುತಾತ್ಮ ಯೋಧ ಗುರುವಿನ ಪತ್ನಿಗೆ ಟಿಕೆಟ್ ನೀಡುವಂತೆ ಬಹುಜನ ಸಮಾಜ ಪಕ್ಷದ ನಾಯಕ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದ್ವಾರಕಾನಾಥ್ ಸಲಹೆ ನೀಡಿದ್ದಾರೆ.
ಈ ಕುರಿತು ಬಿಎಸ್ ಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿರುವ ದ್ವಾರಕಾನಾಥ್, ಮಂಡ್ಯದಲ್ಲಿ ಹಣಬಲ, ತೋಳ್ಬಲದ ರಾಜಕೀಯ ನಡೆಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಜನತಾ ರಾಜಕೀಯಕ್ಕೆ ನಾಂದಿ ಹಾಡಲು ಹುತಾತ್ಮ ಯೋಧ ಗುರುವಿನ ಪತ್ನಿಗೆ ಟಿಕೆಟ್ ನೀಡಬೇಕು ಎಂದು ದ್ವಾರಕಾನಾಥ್ ಆಗ್ರಹಿಸಿದ್ದಾರೆ.
ಇನ್ನು ದ್ವಾರಕಾನಾಥ್ ಅವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಕುರಿತು ಕೆಲವರು ಸಹಮತ ವ್ಯಕ್ತಪಡಿಸಿದರೆ ಇನ್ನೂ ಕೆಲವರು ವಿರೋಧಿಸುತ್ತಿದ್ದಾರೆ.
"