ಕುಖ್ಯಾತ ಮಾವೋವಾದಿ ನಾಯಕ ಸಿಪಿ ಜಲೀಲ್ ಎನ್ ಕೌಂಟರ್ ನಲ್ಲಿ ಹತ| ಸಿಪಿ ಜಲೀಲ್ ಹೊಡೆದುರುಳಿಸಿದ ಕೇರಳದ ಆ್ಯಂಟಿ ಮಾವೋಯಿಸ್ಟ್ ಫೋರ್ಸ್| ಪರಾರಿಯಾದ ಮಾವೋವಾದಿಗಳು ಕರ್ನಾಟಕ, ತಮಿಳುನಾಡು ಅರಣ್ಯ ಪ್ರದೇಶಕ್ಕೆ ನುಗ್ಗಿದ ಶಂಕೆ|

ತಿರುವನಂತಪುರಂ(ಮಾ.07): ಕೇರಳದ ಕುಖ್ಯಾತ ಮಾವೋವಾದಿ ನಾಯಕ ಸಿಪಿ ಜಲೀಲ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಆ್ಯಂಟಿ ಮಾವೋಯಿಸ್ಟ್ ಫೋರ್ಸ್ ತಂಡ ಇಂದು ವೈನಾಡು ಜಿಲ್ಲೆಯ ವೈತಿರಿ ಬಳಿ ಮಾವೋವಾದಿ ತಂಡದ ಚಲನವಲನವನ್ನು ಗುರುತಿಸಿದೆ. ಕಳೆದ ರಾತ್ರಿ ಮಾವೋವಾದಿ ಗುಂಪೊಂದು ರೆಸಾರ್ಟ್ ಗೆ ನುಗ್ಗಿ ಊಟ ಮತ್ತು ಹಣಕ್ಕೆ ಬೇಡಿಕೆ ಇಟ್ಟಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಥಂಡರ್ ಬೋಲ್ಟ್ ತಂಡ ಶರಣಾಗುವಂತೆ ಆದೇಶಿಸಿದೆ.

ಇದಕ್ಕೆ ಪ್ರತಿಯಾಗಿ ಮಾವೋವಾದಿಗಳು ಪೊಲೀಸರತ್ತ ಗುಂಡು ಹಾರಿಸಿದ್ದು, ಎನ್‌ಕೌಂಟರ್‌ನಲ್ಲಿ ಮಾವೋವಾದಿ ಹಿರಿಯ ನಾಯಕ ಸಿಪಿ ಜಲೀಲ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Scroll to load tweet…

ಇನ್ನು ಘಟನಾ ಸ್ಥಳದಿಂದ ಕಾಲ್ಕಿತ್ತ ಮಾವೋವಾದಿಗಳು ಸಮೀಪದ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದು, ಬಂಡೀಪುರ ಅರಣ್ಯ ಪ್ರದೇಶದ ಮೂಲಕ ಕರ್ನಾಟಕ ಅಥವಾ ತಮಿಳುನಾಡಿಗೆ ಕಾಲಿಡುವ ಆತಂಕ ಎದುರಾಗಿದೆ. ಈ ಕುರಿತು ಎಚ್ಚರದಿಂದ ಇರುವಂತ ಎರಡೂ ರಾಜ್ಯಗಳ ಪೊಲೀಸರಿಗೆ ಕೇರಳ ಪೊಲೀಸರು ಸಂದೇಶ ರವಾನಿಸಿದ್ದಾರೆ.

ಕೂಂಬಿಂಗ್ ಕಾರ್ಯಾಚರಣೆ ಶುರು:

ಇನ್ನು ನಕ್ಸಲರು ಬಂಡೀಪುರ ಅಥವಾ ನಾಗರಹೊಳೆ ಅರಣ್ಯ ಪ್ರದೇಶ ಪ್ರವೇಶಿಸಿರುವ ಶಂಕೆರ ವ್ಯಕ್ತವಾಗುತ್ತಿದ್ದಂತೇ ಈ ಪ್ರದೇಶದಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಶುರು ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕ ಬಾಲಚಂದ್ರ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯಿಂದ ಕೂಂಬಿಂಗ್ ಕಾರ್ಯಾಚರಣೆ ಶುರುವಾಗಿದೆ ಎಂದು ಹೇಳಿದರು.