ಇಂದು ಹುರ್ರಿಯತ್ ನಾಯಕ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಭೇಟಿಯಾದ ನಿಯೋಗ, ಕಣಿವೆಯ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿ, ಪ್ರತಿಭಟನಕಾರರನ್ನು ಸಮಾಧಾನಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು.
ನವದೆಹಲಿ (ಮೇ. 25): ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನೇತೃತ್ವದ 5 ಮಂದಿ ನಿಯೋಗವು ಕಾಶ್ಮೀರಿ ನಾಯಕರೊಂದಿಗೆ ಮಾತುಕತೆಯನ್ನಾರಂಭಿಸಿದೆ.
ಇಂದು ಹುರ್ರಿಯತ್ ನಾಯಕ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಭೇಟಿಯಾದ ನಿಯೋಗ, ಕಣಿವೆಯ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿ, ಪ್ರತಿಭಟನಕಾರರನ್ನು ಸಮಾಧಾನಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು.
ಕಾಶ್ಮೀರದಲ್ಲಿ ಪರಿಸ್ಥಿತಿ ದಿನೇದಿನೆ ಬಿಗಡಾಯಿಸುತ್ತಿದ್ದು, ವಿದ್ಯಾರ್ಥಿಗಳು ಕೂಡಾ ಪ್ರತಿಭಟನೆಗಳಲ್ಲಿ ತೊಡಗಿರುವ ಕಳವಳಕಾರಿ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಕಾಶ್ಮೀರಿ ನಾಯಕರ ಜತೆ ಮಾತುಕತೆ ನಡೆಸಬೇಕೆಂದು ಅಯ್ಯರ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು. ಆ ಮೂಲಕ ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿ ತರಬಹುದು ಹಾಗೂ ಭಾರತ-ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಕೂಡಾ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ನಿಯೋಗದಲ್ಲಿ ಮಾಜಿ ವಾಯುಸೇನಾ ಮುಖ್ಯಸ್ಥ ಓ.ಪಿ.ಶಾ, ಕಪಿಲ್ ಕಾಕ್, ವಿನೋದ್ ಶರ್ಮಾ ಇದ್ದಾರೆ. ನಿಯೋಗವು ಇನ್ನೊಬ್ಬ ಪ್ರಮುಖ ಕಾಶ್ಮೀರಿ ನಾಯಕ ಸೈಯದ್ ಅಲೀ ಶಾ ಗೀಲಾನಿಯನ್ನು ಭೇಟಿಯಾಗಲಿದೆ. ಸ್ವತಂತ್ರ-ಕಾಶ್ಮೀರ ಚಳುವಳಿ ನಾಯಕ ಯಾಸೀನ್ ಮಲಿಕ್’ನ್ನು ಕೂಡಾ ನಿಯೋಗವು ಭೇಟಿಯಾಗಲು ಬಯಸಿದ್ದು, ಆದರೆ ಯಾಸಿನ್ ಮಲಿಕ್ ಭೇಟಿಯಾಗಲು ನಿರಾಕರಿಸಿದ್ದಾರೆನ್ನಲಾಗಿದೆ.
ಕಳೆದ ವರ್ಷ ಹಿರಿಯ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ನೇತೃತ್ವದ ನಿಯೋಗವು ಕೂಡಾ ಕಾಶ್ಮೀರಿ ನಾಯಕರನ್ನು ಭೇಟಿಯಾಗಿತ್ತು. ಆದರೆ ಮಾತುಕತೆಗೆ ಮುನ್ನ ಬಂಧಿಸಲ್ಪಟ್ಟ ಯುವಕರನ್ನು ಹಾಗೂ ಪ್ರತ್ಯೇಕತಾವಾದಿ ನಾಯಕರನ್ನು ಬಿಡುಗಡೆಮಾಡಬೇಕೆಂದು ಶರತ್ತು ಇಟ್ಟಿದ್ದರು.
