ಡಿಜಿಟಲ್ ಇಂಡಿಯಾಗೆ ಚಾಲನೆ ನೀಡಿದ ಮಂಗಳೂರು ಆಟೋ ಚಾಲಕರು
ಪ್ರಧಾನಿ ಮೋದಿ ಕನಸಾದ ಡಿಜಿಟಲ್ ಇಂಡಿಯಾ ಯೋಜನೆಗೆ ಮಂಗಳೂರಿನ ಆಟೋ ಚಾಲಕರು ಸಾಥ್ ನೀಡಿದ್ದಾರೆ.
ಮಂಗಳೂರು (ಡಿ.08): ಪ್ರಧಾನಿ ಮೋದಿ ಕನಸಾದ ಡಿಜಿಟಲ್ ಇಂಡಿಯಾ ಯೋಜನೆಗೆ ಮಂಗಳೂರಿನ ಆಟೋ ಚಾಲಕರು ಸಾಥ್ ನೀಡಿದ್ದಾರೆ.
ಕುಡ್ಲ ಸೌಹಾರ್ದ ಸಂಘದ ಮೂಲಕ ಆಟೋ ಚಾಲಕರು ಪ್ರಧಾನಿ ಕನಸನ್ನು ನನಸು ಮಾಡಿದ್ದಾರೆ. ಆಟೋಗಳಲ್ಲಿ ಪೇಟಿಎಂ ಮೂಲಕ ನಗದುರಹಿತ ಸೇವೆಗೆ ಚಾಲನೆ ನೀಡಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ರಿಕ್ಷಾ ಚಾಲಕರೇ ಆರಂಭಿಸಿದ ಕುಡ್ಲ ಸೌಹಾರ್ದ ಸಹಕಾರಿ ಸಂಘದ ನೇತೃತ್ವದಲ್ಲಿ, 200ಕ್ಕೂ ಹೆಚ್ಚು ಆಟೋ ರಿಕ್ಷಾಗಳು ಪೇಟಿಯಂ ಮೂಲಕ ನಗದು ಸೇವೆಯನ್ನು ಆರಂಭಿಸಿವೆ. ಚಲೋ ಕುಡ್ಲ ಎಂಬ ಆಪ್ ಮೂಲಕ ಆಟೋ ಚಾಲಕರು ಗ್ರಾಹಕರನ್ನು ಆಕರ್ಷಿಸಲು ಹೊರಟಿದ್ದಾರೆ. ಐ ಸರ್ಚ್ ಮಾನಿಟರಿಂಗ್ ಕಂಪನಿ ಎಂಬ ಖಾಸಗಿ ಸಂಸ್ಥೆಯೊಂದು ಈ ಆಪನ್ನು ಅಭಿವೃದ್ಧಿ ಪಡಿಸಿದ್ದು, ರಿಕ್ಷಾ ಚಾಲಕರಿಗೆ ತರಬೇತಿ ಮತ್ತು ತಂತ್ರಜ್ಞಾನವನ್ನು ಒದಗಿಸಿದೆ.
ನಗದುರಹಿತ ಸೇವೆಯಿಂದ ಕಷ್ಟಪಟ್ಟು ದುಡಿಯುವ ಆಟೋ ಚಾಲಕರು ಉತ್ತಮ ಆದಾಯ ಪಡೆಯುವ ನಿರೀಕ್ಷೆಯನ್ನೂ ಹೊಂದಿದ್ದಾರೆ. ಡ್ರೈ ರನ್ ಕಡಿಮೆಗೊಳಿಸಿ ಆಟೋ ಚಾಲಕರಿಗೆ ಆದಾಯ ಹೆಚ್ಚಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ. ಪ್ರಧಾನಿ ಡಿಜಿಟಲ್ ಇಂಡಿಯಾ ಕನಸು ಹಾಗೂ ನಗದುರಹಿತ ಸೇವೆಯ ಸಾಧ್ಯತೆಗಳನ್ನು ಮಂಗಳೂರಿನ ಆಟೋ ಚಾಲಕರು ಸಾಕಾರ ಮಾಡಿಕೊಟ್ಟಿದ್ದಾರೆ.