ಸೈಕಲ್'ನಲ್ಲಿ ಬರುತ್ತಿದ್ದ ಪತಿಗೆ ಪತ್ನಿ ಕಾರು ಡಿಕ್ಕಿ, ಪತಿ ಸಾವು!
ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಪತ್ನಿ ರಶ್ಮಿ ಮುಂದೆ ಚಲಿಸುತ್ತಿದ್ದ ತಮ್ಮ ಪತಿಯ ಸೈಕಲ್ಗೆ ಡಿಕ್ಕಿ ಹೊಡೆದೇ ಬಿಟ್ಟರು. ಸೈಕಲ್'ನಿಂದ ಕೆಳಕ್ಕೆ ಅಪ್ಪಳಿಸಿದ ಅಶೋಕ್ ಅವರ ತಲೆ ರಭಸವಾಗಿ ರಸ್ತೆಗೆ ಹೊಡೆಯಿತು.
ಇಡುಕ್ಕಿ: ಬೇಸಿಗೆ ರಜೆ ಪ್ರಯುಕ್ತ ಮುನ್ನಾರ್'ಗೆ ತೆರಳಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ದುರ್ದೈವವೆಂದರೆ, ರಸ್ತೆಯಲ್ಲಿ ಸೈಕಲ್ನಲ್ಲಿ ಚಲಿಸುತ್ತಿದ್ದ ಪತಿಗೆ, ಪತ್ನಿಯ ಕಾರು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಸೈಕ್ಲಿಂಗ್'ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕೇರಳ ಮೂಲದ ಅಶೋಕ್ ಸುಕುಮಾರನ್ ನಾಯರ್, ಬೇಸಿಗೆ ರಜೆ ಪ್ರಯುಕ್ತ ಕುಟುಂಬ ಸಮೇತರಾಗಿ ಮುನ್ನಾರ್'ಗೆ ತೆರಳಿದ್ದರು. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಅಶೋಕ್ ಸೈಕ್ಲಿಂಗ್ ಮಾಡುತ್ತಿದ್ದರು. ಇದೇ ವೇಳೆ, ಅವರ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾರು ನಡೆಸುತ್ತಿದ್ದರು. ಈ ವೇಳೆ, ಸ್ಟೀರಿಯೊ ಸಿಸ್ಟಮ್'ನ ಧ್ವನಿ ಸರಿಪಡಿಸುವಲ್ಲಿ ಅಶೋಕ್ ಅವರ ಪತ್ನಿ ಮುಂದಾದರು. ಆದರೆ, ಈ ಸಂದರ್ಭದಲ್ಲಿ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡ ಪತ್ನಿ ರಶ್ಮಿ ಮುಂದೆ ಚಲಿಸುತ್ತಿದ್ದ ತಮ್ಮ ಪತಿಯ ಸೈಕಲ್ಗೆ ಡಿಕ್ಕಿ ಹೊಡೆದೇ ಬಿಟ್ಟರು. ಸೈಕಲ್'ನಿಂದ ಕೆಳಕ್ಕೆ ಅಪ್ಪಳಿಸಿದ ಅಶೋಕ್ ಅವರ ತಲೆ ರಭಸವಾಗಿ ರಸ್ತೆಗೆ ಹೊಡೆಯಿತು. ತಕ್ಷಣವೇ ರಶ್ಮಿ ತಮ್ಮ ಪತಿಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
epaper.kannadaprabha.in