ಬಿಎಂಟಿಸಿ ಬಸ್ನಲ್ಲಿ ಕೂದಲು ಕಳ್ಳರಿದ್ದಾರೆ : ಯುವತಿಯರೇ ಎಚ್ಚರ!
ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ಯುವತಿಯರೇ ನೀವು ಎಚ್ಚರಿಕೆ ವಹಿಸುವುದು ಅಗತ್ಯ ಯಾಕೆಂದರೆ ಇಲ್ಲಿದ್ದಾರೆ ಕೂದಲು ಕಳ್ಳರು.
ಬೆಂಗಳೂರು : ಬಿಎಂಟಿಸಿ ಬಸ್ನಲ್ಲಿ ಯುವತಿಯ ಕೂದಲಿಗೆ ಕತ್ತರಿ ಹಾಕಿದ ಕಿಡಿಗೇಡಿಯೊಬ್ಬನಿಗೆ ಸಹ ಪ್ರಯಾಣಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಬಸ್ ನಿಲ್ದಾಣದಲ್ಲಿ ನಡೆದಿದೆ.
ಹೋಟೆಲ್ ನೌಕರ ರಾಜು ಎಂಬಾತನೇ ಈ ಕೃತ್ಯ ಎಸಗಿದ್ದು, ತನ್ನ ಸಂಬಂಧಿ ಜತೆ ಬಸ್ನಲ್ಲಿ ಬುಧವಾರ ಮಧ್ಯಾಹ್ನ ಸಂತ್ರಸ್ತೆ ಕತ್ರಿಗುಪ್ಪೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್ನ ಯುವತಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ರಾಜು, ಆಕೆಗೆ ಗೊತ್ತಾದಂತೆ ಕತ್ತರಿಯಿಂದ ಆಕೆ ಕೂದಲು ಕತ್ತರಿಸಿದ್ದಾನೆ. ಈ ಕೃತ್ಯವನ್ನು ನೋಡಿದ ಸಂತ್ರಸ್ತೆ ಸಂಬಂಧಿ, ತಕ್ಷಣವೇ ಬಸ್ ಚಾಲಕ ಹಾಗೂ ಕಂಡಕ್ಟರ್ಗೆ ವಿಷಯ ತಿಳಿಸಿದ್ದಾರೆ. ಬಳಿಕ ಈ ವಿಚಾರ ತಿಳಿದ ಸಹ ಪ್ರಯಾಣಿಕರೆಲ್ಲ ಸೇರಿಕೊಂಡು ರಾಜುಗೆ ಧರ್ಮದೇಟು ನೀಡಿ ಹನುಮಂತನಗರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಅಲ್ಲದೆ ಈ ಗಲಾಟೆ ವಿಷಯ ತಿಳಿದು ಠಾಣೆಗೆ ಬಂದ ರಾಜು ಭಾವಿ ಪತ್ನಿ ಸಹ, ರಾಜು ಕಪಾಳಕ್ಕೆ ಬಾರಿಸಿದ್ದರು. ಹಣಕ್ಕಾಗಿ ಕೂದಲು ಕತ್ತರಿಗೆ ಹಾಕಿದ್ದೆ ಎಂದು ರಾಜು ಹೇಳಿಕೆ ಕೊಟ್ಟಿದ್ದಾನೆ. ಮುಂದಿನ ತಿಂಗಳು ನನ್ನ ಮದುವೆ ಇದೆ. ಹೀಗಾಗಿ ಈ ಬಗ್ಗೆ ದೂರು ಕೊಟ್ಟು ಠಾಣೆಗೆ ಅಲೆಯಲು ನನಗೆ ಇಷ್ಟವಿಲ್ಲ ಎಂದು ಹೇಳಿದ ಯುವತಿ, ಘಟನೆ ಸಂಬಂಧ ದೂರು ಕೊಡಲು ನಿರಾಕರಿಸಿದರು. ಹಾಗಾಗಿ ನಾವು ಸಾಮಾನ್ಯ ಪ್ರಕರಣವೆಂದು ಪರಿಗಣಿಸಿ ರಾಜುಗೆ ಮತ್ತೆ ಈ ರೀತಿ ಕೃತ್ಯ ಎಸಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದೇವು ಎಂದು ಪೊಲೀಸರು ಹೇಳಿದ್ದಾರೆ.